ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಇಂದು ಬೆಳಿಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈ ಹಿಂದೆ ಐಶ್ವರ್ಯ ಗೌಡ ಎಂಬವರು “ನಾನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹೋದರಿ” ಎಂಬ ಸುಳ್ಳು ಹೇಳಿಕೆಯ ಮೂಲಕ ಹಲವರಿಗೆ ಮೋಸ ಮಾಡಿದ ಪ್ರಕರಣವು ಬೆಳಕಿಗೆ ಬಂದಿತ್ತು. ಅಪಾರ ಮೊತ್ತದ ಹಣ ಹಾಗೂ ಚಿನ್ನಾಭರಣ ವಂಚನೆಯ ಆರೋಪ ಈ ಪ್ರಕರಣಕ್ಕೆ ಸಂಬಂಧಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಪ್ರಕರಣ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ನಡುವೆ, ಐಶ್ವರ್ಯ ಗೌಡಗೆ ಇತ್ತೀಚೆಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದ್ದು, ಅದೇ ದಿನ ಡಿಕೆ ಸುರೇಶ್ಗೆ ಇಡಿ ನೋಟಿಸ್ ಜಾರಿ ಮಾಡಿತ್ತು. ನಿಗದಿಯಂತೆ ಜೂನ್ 19 ರಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅವರು ಆಗ ಹಾಜರಾಗಲಿಲ್ಲ.
ಇದರಿಂದಾಗಿ ಇಡಿ ಅಧಿಕಾರಿಗಳು ಮತ್ತೊಮ್ಮೆ ನೋಟಿಸ್ ನೀಡಿದ್ದು, ಅದಕ್ಕೆ ಅನುಗುಣವಾಗಿ ಅವರು ಇಂದು, ಜೂನ್ 23ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಇಡಿ ಕಚೇರಿಗೆ ಹಾಜರಾಗಲಿದ್ದಾರೆ.