ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸತ್ಯ ಬಹಿರಂಗವಾಗುವುದಕ್ಕೆ ಹೆಚ್ಚು ಕಾಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈ ಸರ್ಕಾರದ ಒಳಗಿನ ಅಕ್ರಮಗಳು ಒಂದರ ಹಿಂದೆ ಒಂದು ಹೊರಬರಲಿವೆ. ಈಗಾಗಲೇ ಕೆಲವರು ಬಾಯಿ ತೆರೆಯಲು ಪ್ರಾರಂಭ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನೂ ಹಲವರು ಮಾತನಾಡಲಿದ್ದಾರೆ” ಎಂದು ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಈಗಾಗಲೇ ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗಂಭೀರ ಆರೋಪ ಮಾಡಿರುವುದನ್ನು ಉಲ್ಲೇಖಿಸಿದರು. “ಬಿ.ಆರ್. ಪಾಟೀಲ್ ಬಹುಮಹಡಿ ಮನೆಗಳ ಹಂಚಿಕೆಯಲ್ಲಿ ಲಂಚ ಕೇಳಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ. ‘ಲಂಚ ಕೊಡದೆ ಯಾವುದೇ ಕೆಲಸವೇ ಆಗುತ್ತಿಲ್ಲ’ ಎಂಬುದಾಗಿ ಅವರೇ ಹೇಳಿರುವುದು ದುರದೃಷ್ಟಕರ” ಎಂದು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡುತ್ತಾ, ಸಿಎಂ ಸಿದ್ದರಾಮಯ್ಯ ಕರೆದರೆ ವಾಸ್ತವದ ಸ್ಥಿತಿ ಹೇಳುವುದಾಗಿ ಹೇಳಿದ್ದಾರೆ. ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇನ್ನೂ ಮುಂದೆ ಶಾಸಕರು, ಪಕ್ಷದ ಮುಖಂಡರು ಅಥವಾ ಇನ್ನೊಬ್ಬರು ಕೂಡ ಸರ್ಕಾರದ ಒಳಗಿನ ದುರ್ಬಳಕೆಯ ಬಗ್ಗೆ ಬಾಯಿಬಿಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. “ಇದು ಕೇವಲ ರಾಜು ಕಾಗೆ ಅಥವಾ ಪಾಟೀಲ್ ಅವರ ಮಾತಾಗಿಲ್ಲ. ಈ ರೀತಿ ಹೇಳಲು ಹತ್ತಾರು ಜನರಿದ್ದಾರೆ. ಸದ್ಯದಲ್ಲೇ ಇವರು ಕೂಡ ತಮ್ಮ ಅನುಭವಗಳನ್ನು ಬಹಿರಂಗಪಡಿಸುತ್ತಾರೆ. ಕಾದು ನೋಡಿರಿ, ಸತ್ಯ ಹೊರಬರುತ್ತದೆ” ಎಂದು ಎಚ್ಚರಿಕೆ ನೀಡಿದರು.