ಮಂಗಳೂರು: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಮಂಗಳೂರಿಗೂ ತಟ್ಟಿದೆ. ಇರಾನ್ ಸೇನೆ ಕೊಲ್ಲಿ ರಾಷ್ಟ್ರ ಕತಾರ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿದ ಪರಿಣಾಮ, ಹಲವಾರು ದೇಶಗಳು ತಮ್ಮ ವಾಯುಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಇದರ ಪರಿಣಾಮವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದ ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಮಂಗಳೂರಿನಿಂದ ದಮ್ಮಾಮ್ಗೆ ಹೊರಟಿದ್ದ ಎರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು ಮಧ್ಯದಲ್ಲಿ ಮುಸ್ಕತ್ ಕಡೆ ತಿರುಗಿಸಲಾಯಿತು. ಇದೇ ರೀತಿ ಅಬುದಾಭಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿ, ನಂತರ ಎರಡೂ ವಿಮಾನಗಳು ಮಂಗಳೂರಿಗೆ ವಾಪಸ್ ಆಗಿವೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಏರ್ಪೋರ್ಟ್ ಆಡಳಿತ ಮನವಿ ಮಾಡಿದೆ. ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಉಂಟಾಗಿರುವ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ.