ಬೆಂಗಳೂರು: ಕೇಂದ್ರದ ಮಾಜಿ ಸಚಿವ ಮತ್ತು ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಕಾರು ಓವರ್ಟೇಕ್ ವಿಚಾರದಲ್ಲಿ ಉಂಟಾದ ಗಲಾಟೆಯಿಂದ ಆರಂಭವಾದ ಘಟನೆಯು ಹಲ್ಲೆ, ಗೂಂಡಾಗಿರಿ ಆರೋಪದ ತನಕ ಬೆಳೆದಿದೆ.
ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ನಡೆದಿದ್ದು, ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮುಸ್ಲಿಂ ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆದಿರುವ ಆರೋಪಗಳು ಕೇಳಿ ಬಂದಿವೆ. ಈ ಪ್ರಕರಣದಲ್ಲಿ ಅನಂತ್ ಕುಮಾರ್ ಹೆಗಡೆ, ಅವರ ಪುತ್ರ ಅಶುತೋಷ್ ಹೆಗಡೆ, ಕಾರು ಚಾಲಕ ಮತ್ತು ಗನ್ಮ್ಯಾನ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾಹಿತಿಯಂತೆ, ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ಕಾರನ್ನು ಇನ್ನೋವಾ ಕಾರು ಓವರ್ಟೇಕ್ ಮಾಡಿದ್ದನ್ನೇ ಕಾರಣವನ್ನಾಗಿ ಮಾಡಿಕೊಂಡು, ಆ ಕಾರಿನಲ್ಲಿ ಇದ್ದ ಸಲ್ಮಾನ್ ಖಾನ್ (30), ಸೈಫ್ ಖಾನ್ (28), ಇಲಿಯಾಸ್ ಖಾನ್ (50) ಮತ್ತು ಗುಲ್ ಷಿರಾ ಉನ್ನೀಸಾ (45) ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.
ಗಾಯಗೊಂಡ ನಾಲ್ವರನ್ನು ದಾಬಸ್ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.