ಮಂಗಳೂರು: “ಸಾವು ಯಾವಾಗ ಹೇಗೆ ಬರುತ್ತದೆ ಎನ್ನುವುದು ಯಾರಿಗೂ ತಿಳಿಯದು”. ಮಂಗಳೂರಿನಲ್ಲಿ ನಡೆದಿರುವ ಈ ಹೃದಯವಿದ್ರಾವಕ ಘಟನೆ ಎಲ್ಲರ ಮನ ಕಲುಕುತ್ತಿದೆ. ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಅಕ್ಕ, ಕಾರು ಡಿಕ್ಕಿಯಲ್ಲಿ ಮೃತಪಟ್ಟಿರುವ ಘಟನೆ ಪಾವಂಜೆ ಬಳಿ ಇಂದು ಸಂಭವಿಸಿದೆ.
ಮೃತರು ಮಂಗಳೂರು ಬಂಗ್ರಕೂಳೂರು ನಿವಾಸಿಯಾದ ಶ್ರುತಿ (27) ಎಂಬವರು. ಅವರು ಚೆನ್ನೈನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು, ಕಂಪ್ಯೂಟರ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದರು. ಶ್ರುತಿಯ ತಮ್ಮ ಸುಜಿತ್ (ಮೆಕ್ಯಾನಿಕ್ ಉದ್ಯೋಗಿ) ಜೂನ್ 10ರಂದು ನಿಧನರಾಗಿದ್ದು, ಅಂತ್ಯಕ್ರಿಯೆಗೆ ಅವರು ತಾತ್ಕಾಲಿಕವಾಗಿ ಕೆಲಸಕ್ಕೆ ರಜೆ ಹಾಕಿ ಚೆನ್ನೈದಿಂದ ಮಂಗಳೂರಿಗೆ ಬಂದಿದ್ದರು.
ಶ್ರುತಿ ಅವರು ಇಂದು ಬೆಳಿಗ್ಗೆ ತಂದೆ ಗೋಪಾಲ ಆಚಾರ್ಯ (57) ಅವರೊಂದಿಗೆ ಬ್ಯಾಂಕ್ ಸಂಬಂಧಿತ ಕೆಲಸಕ್ಕಾಗಿ ಸ್ಕೂಟರ್ನಲ್ಲಿ ಕಿನ್ನಿಗೋಳಿ ಕಡೆಗೆ ಹೋಗಿ, ಬಳಿಕ ಮನೆಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಳೆಯ ಕಾರಣದಿಂದ ಪಾವಂಜೆ ಬಳಿ ಅವರು ಸ್ಕೂಟರ್ ನಿಲ್ಲಿಸಿ, ರೈನ್ಕೋಟ್ ಧರಿಸುತ್ತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನಿಂತಿದ್ದ ಸ್ಕೂಟರ್ ಹಾಗೂ ಪಕ್ಕದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಕಾರಿನ ತೀವ್ರ ವೇಗಕ್ಕೆ ಶ್ರುತಿ ಹಾಗೂ ಸ್ಕೂಟರ್ ರಸ್ತೆ ಬದಿಯ ಸಿಮೆಂಟ್ ಸ್ಲ್ಯಾಬ್ಗೆ ತೀವ್ರವಾಗಿ ಅಪ್ಪಳಿಸಿ ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಆಘಾತಕಾರಿ ಗಾಯಗಳಿಗೆ ಒಳಗಾಗಿದ್ದು, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ತಂದೆ ಗೋಪಾಲ ಆಚಾರ್ಯ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಮಕ್ಕಳನ್ನು ಕಣ್ಣೆದುರೇ ಕಳೆದುಕೊಂಡಿದ್ದು ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಕಾರು ಚಾಲಕನ ವಿರುದ್ಧ ತನಿಖೆ ಪ್ರಾರಂಭಿಸಲಾಗಿದೆ.