ಬೆಂಗಳೂರು: ಪಕ್ಷದೊಳಗಿನ ಗೊಂದಲ, ಅಸಮಾಧಾನ ಮತ್ತು ಮುಖಂಡರು ಮನಬಂದಂತೆ ಹೇಳಿಕೆ ನೀಡುತ್ತಿರುವ ಬಗ್ಗೆ ಸಚಿವರು ಮತ್ತು ಶಾಸಕರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೆಂಗಳೂರು ಮತ್ತು ಮೈಸೂರು ವಿಭಾಗದ 40 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬೆಳಗಾವಿ ವಿಭಾಗದ ಪಕ್ಷದ ಶಾಸಕರಿಂದ ಅಭಿಪ್ರಾಯ ಪಡೆಯಲು ಮತ್ತೆ 7ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮೈಸೂರು ವಿಭಾಗದ 42 ಶಾಸಕರ ಜತೆ ಸುರ್ಜೇವಾಲಾ ಅವರ ಚರ್ಚೆ ನಡೆಸಬೇಕಿತ್ತು. ಆದರೆ, ಪಿ.ಎಂ. ನರೇಂದ್ರಸ್ವಾಮಿ ಮತ್ತು ಕಾಂಗ್ರೆಸ್ ಸಹ ಸದಸ್ಯರಾಗಿರುವ ಸರ್ವೋದಯ ಪಕ್ಷದ ದರ್ಶನ್ ಪುಟ್ಣಣ್ಣಯ್ಯ ಅವರು ವಿದೇಶ ಪ್ರವೇಶದಲ್ಲಿರುವುದರಿಂದ ಭೇಟಿ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಗಣೇಶ್ ಹುಕ್ಕೇರಿ, ನಯನಾ ಮೋಟಮ್ಮ, ಜಿ.ಎಚ್. ಶ್ರೀನಿವಾಸ್, ಕೆ.ಎಸ್. ಆನಂದ್, ಎ.ಎಸ್. ಪೊನ್ನಣ್ಣ, ಕದಲೂರು ಉದಯ್ ಮುಂತಾದವರ ಜೊತೆ ಸುರ್ಜೇವಾಲಾ ಅವರು ಬುಧವಾರ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ.
ಶಿವಲಿಂಗೇಗೌಡ ಅವರು ಗ್ಯಾರಂಟಿಗಳ ಅನುಷ್ಠಾನ ಉತ್ತಮವಾಗಿದೆ. ಆದರೆ ಕ್ಷೇತ್ರಕ್ಕೆ ಅನುದಾನದ ಸಮಸ್ಯೆ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ. ಜತೆಗೆ ಶಾಸಕರ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆಯೂ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಪದೇ ಪದೇ ಚರ್ಚೆಯಾಗುತ್ತಿರುವುದು ಉತ್ತಮ ಲಕ್ಷಣ ಅಲ್ಲ. ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಎಲ್ಲ ಶಾಸಕರು ಅವರ ಪರವಾಗಿದ್ದಾರೆ. ಬೇರೆ ಯಾರೇ ಸಿಎಂ ಆದರೂ ಸರ್ಕಾರ ಸುಭದ್ರವಾಗಿ ನಡೆಯುವುದು ಕಷ್ಟ ಎಂದೂ ಅವರು ಹೇಳಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಕೆಲಸ, ಪಕ್ಷ ಸಂಘಟನೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ಚರ್ಚೆ ಆಗಿಲ್ಲ. ಅನುದಾನ ಕುರಿತು ತಮಗೆ ಯಾವ ಅಸಮಾಧಾನವೂ ಇಲ್ಲ ಎಂದು ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ.