ಬೆಂಗಳೂರು: ಹಾಸನ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಅವರು, “ಕರೋನಾ ಲಸಿಕೆ ಕಾರಣವಾಗಿಲ್ಲ. ಕರೋನಾದಿಂದ ಗುಣಮುಖರಾದವರಿಗೆ ಕೆಲವೊಂದು ಸಂದರ್ಭಗಳಲ್ಲಿ ಹೃದಯಾಘಾತ ಸಂಭವಿಸಿದೆ ಎಂಬ ವರದಿ ಇದೆ. ಆದರೆ ಲಸಿಕೆಯು ನೇರ ಕಾರಣವಲ್ಲ” ಎಂದು ತಿಳಿಸಿದರು.
ಅವರು ಮುಂದುವರೆದು, “ಕರೋನಾದ ಒಂದು ವರ್ಷದಲ್ಲಿ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗುವ ಸಾಧ್ಯತೆ ಇತ್ತು. ಆದರೆ ಮೂರು ವರ್ಷಗಳ ಬಳಿಕ ಅಂತಹ ಪರಿಣಾಮಗಳು ಕಡಿಮೆಯಾಗಿದೆ. ಎಂಆರ್ಎನ್ಎ(mRNA) ಲಸಿಕೆ ಬಗ್ಗೆ ಕೆಲವು ಅನುಮಾನಗಳಿದ್ದರೂ, ಭಾರತದಲ್ಲಿ ಹೆಚ್ಚು ಜನರು ಅದನ್ನು ಪಡೆದುಕೊಂಡಿಲ್ಲ” ಎಂದು ಹೇಳಿದರು.
ಮುಖ್ಯ ಹೈಲೈಟ್ಸ್:
- ಹೃದಯಾಘಾತವನ್ನು “ಸಡನ್ ಡೆತ್” ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗುವುದು.
- ಮರಣೋತ್ತರ ಪರೀಕ್ಷೆ ಕಡ್ಡಾಯ, ಸತ್ಯಾಂಶ ಬಯಲು ಮಾಡಲು ಕ್ರಮ.
- ಪಠ್ಯಕ್ರಮದಲ್ಲಿ ಹೃದಯ ಆರೋಗ್ಯ ಪಾಠ, ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆ ಜಾರಿಗೆ ತರಲಿದೆ.
- ಡಾ. ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆ ತಾಲೂಕು ಆಸ್ಪತ್ರೆಗೆ ವಿಸ್ತರಣೆ.
- ಸರ್ಕಾರಿ, ಗುತ್ತಿಗೆ ನೌಕರರು, ಖಾಸಗಿ ಉದ್ಯೋಗಿಗಳು ವರ್ಷಕ್ಕೆ ಒಂದು ಬಾರಿ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ.
ಹೃದಯಾಘಾತಕ್ಕೆ ಪ್ರಧಾನ ಕಾರಣಗಳು: ಧೂಮಪಾನ, ಜಂಕ್ ಫುಡ್ ಸೇವನೆ, ತೂಕವೃದ್ಧಿ (ಒಬೆಸಿಟಿ), ಡಯಾಬಿಟಿಸ್ ಮತ್ತು ನೋಂದಾಯಿಸದ ಆರೋಗ್ಯ ಸಮಸ್ಯೆಗಳು. ಕರೋನಾ ಬಂದಾಗ ತೆಗೆದುಕೊಂಡ ಬೇರೆ ಬೇರೆ ಮೆಡಿಸನ್ನಿಂದ ಹೃದಯದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.
“ಜುಲೈ 10 ರಂದು ಹಾಸನ ಜಿಲ್ಲೆಯ ತಜ್ಞರ ಸಮಿತಿಯಿಂದ ಅಂತಿಮ ವರದಿ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಭರವಸೆ ನೀಡಿದರು.