ಮೈಸೂರು: ಧರ್ಮ ಗ್ರಂಥಗಳ ಅಧ್ಯಯನದ ಮೂಲಕ ಧರ್ಮ, ತತ್ವ ಮತ್ತು ವಿವೇಕದ ಅರಿವನ್ನು ಪಡಿಯೋಣ. ಪ್ರತಿನಿತ್ಯ ಧ್ಯಾನ, ಭಜನೆ, ಯೋಗ ಅಧ್ಯಯನದ ಮೂಲಕ ಚಾತುರ್ಮಾಸದ ಕಾಲಘಟ್ಟದಲ್ಲಿ ಭಗವಂತನ ಸ್ಮರಣೆಯ ಮೂಲಕ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದು ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ನಿಕಟ ಪೂರ್ವ ರಾಜ್ಯ ಸಂಚಾಲಕರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ಅಭಿಪ್ರಾಯಪಟ್ಟರು.
ಅವರು ಮೈಸೂರಿನ ಶ್ರೀ ಶೃಂಗೇರಿ ಶಂಕರ ಮಠದ ಅಭಿನವ ಶಂಕರಾಲಯ ಸಭಾಂಗಣದಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಚಾತುರ್ಮಾಸ ಸಂದರ್ಭದಲ್ಲಿ ಧರ್ಮ ರಕ್ಷಣೆ, ಗುರು ಪರಂಪರೆ ಹಾಗೂ ಶಿಷ್ಯ ಪರಂಪರೆಗೆ ಅಮೂಲ್ಯವಾದ ಕಾಲವಾಗಿದೆ. ಗುರು ಭಕ್ತಿಯ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಧರ್ಮ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಪುರಾಣಗಳು ಮಹಾಕಾವ್ಯಗಳಾದ ರಾಮಾಯಣ ಮಹಾಭಾರತ ,ಭಗವದ್ಗೀತೆ ಹಾಗೂ ಒಳ್ಳೆಯ ವಿಚಾರಗಳ ಅಧ್ಯಯನವನ್ನು ಮಾಡುವ ಮೂಲಕ ಚಾತುರ್ಮಾಸದ ಈ ಅವಧಿಯಲ್ಲಿ ಭಗವಂತನ ನಿರಂತರ ಅಧ್ಯಯನ ಮತ್ತು ಸ್ಮರಣೆಯ ಮೂಲಕ ಸಮಾಜವನ್ನು ಗಟ್ಟಿಗೊಳಿಸುವ ಮೂಲಕ ಪ್ರತಿಯೊಬ್ಬರು ಅಧ್ಯಯನದ ಮೂಲಕ ಜಾಗೃತವಾಗಿ ಮನಸ್ಸು, ದೇಹ ಮತ್ತು ಆತ್ಮದ ನಿರಂತರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿನಿತ್ಯ ಕಡ್ಡಾಯವಾಗಿ ಧ್ಯಾನ ,ಪೂಜೆ, ವಿದ್ವಾಂಸರ ಸತ್ಸಂಗ, ಯೋಗ ಮತ್ತು ಸಾಮೂಹಿಕ ಭಜನೆಯ ಮೂಲಕ ಸಮಾಜದ ಶಕ್ತಿಯನ್ನು ಹೆಚ್ಚಿಸೋಣ .ಧರ್ಮವನ್ನು ತಿಳಿಯೋಣ .ತತ್ವವನ್ನು ಪಾಲಿಸೋಣ .ದೇವಿಯ ಸ್ತೋತ್ರ ಪಠಣ ಪ್ರತಿ ಮನೆಯಲ್ಲೂ ಹೆಚ್ಚಾಗಲಿ ಎಂದು ತಿಳಿಸಿದರು.
ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಮೈಸೂರು ಜಿಲ್ಲಾ ಸಂಚಾಲಕರಾದ ಪ್ರೊ.ನಟರಾಜ್ ಮಾತನಾಡಿ ಮೈಸೂರು ಜಿಲ್ಲೆಯ ಎಲ್ಲಾ ಕಡೆ ಭಜನೆಗಳು ನಡೆಯುತ್ತಿದೆ. ಶ್ರೀಶಂಕರ ತತ್ವ ಪ್ರಸಾರ ಅಭಿಯಾನದ ಮೂಲಕ ಧರ್ಮದ ಸಂರಕ್ಷಣೆ, ಜಾಗೃತಿ ಹಾಗೂ ಸಾಮೂಹಿಕ ಸ್ತೋತ್ರ ಪಠಣ ನಡಿಯುತ್ತಿದೆ . ಕಲ್ಯಾಣವೃಷ್ಟಿ ಸ್ತೋತ್ರ ಪಠಣೆಯ ಕಾರ್ಯ ಎಲ್ಲಾ ಕಡೆ ನಡೆಯುತ್ತಿದೆ ಎಂದು ತಿಳಿಸಿದರು.

ಸತ್ಸಂಗ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಪ್ರೊ.ಯೋಗಾನಂದ, ಚಾಮರಾಜನಗರ ಜಿಲ್ಲಾ ಶಾಂಕರ ತತ್ವ ಪ್ರಸಾರ ಅಭಿಯಾನದ ಅಧ್ಯಕ್ಷರು,ನಿಕಟಪೂರ್ವ ಜಿಲ್ಲಾ ಸಂಚಾಲಕರಾದ ಸುರೇಶ್ ಎನ್ ಋಗ್ವೇದಿ, ಮೈಸೂರು ಮಹಾನಗರದ ಸಂಚಾಲಕರಾದ ಬಾಲಾಜಿ ಪಂತ್, ಭಜನಾ ವಿಭಾಗದ ಮುಖ್ಯಸ್ಥರಾದ ಸಂಗೀತವಿದುಷಿ ಶಶಿಕಲಾ, ನಂಜನಗೂಡು ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಸಂಚಾಲಕರಾದ ಟಿ ಎಸ್ ಗೋಪಿನಾಥ್ ಮತ್ತಿತರು ಉಪಸ್ಥಿತರಿದ್ದರು.