ಯಳಂದೂರು: ಮಹಿಳೆಯರು ವೃತ್ತಿಪರ ಕೌಶಲ್ಯಗಳನ್ನು ಕಲಿಯುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಹುದು ಎಂದು ರಾಷ್ಟ್ರೀಯ ಗ್ರಾಮೀಣ ಜೀವನ ಉಪಾಯ್ ಮಿಷನ್ನ ತಾಲೂಕು ಯೋಜನಾ ವ್ಯವಸ್ಥಾಪಕ ಶ್ರೀಕಾಂತ್ ಹೇಳಿದರು.
ಅವರು ಪಟ್ಟಣ ಸುವರ್ಣ ತಿರುಪತಿ ದೇಗುಲದ ಸಮೀಪದ ಶನಿವಾರ ರಾಷ್ಟ್ರೀಯ ಜೀವನ್ ಮಿಷನ್ ವತಿಯಿಂದ ನಡೆದ ಮಾಸಿಕ ಸಂತೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ತಾವೇ ತಯಾರಿಸಿದ ಉತ್ಪನ್ನವನ್ನು ಮಾರುಕಟ್ಟೆ ಮಾಡಿ ಹೆಚ್ಚು ಲಾಭಗಳಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ತಾಲೂಕಿನ ಸಂಜೀವಿನಿ ಒಕ್ಕೂಟಗಳನ್ನು ಸ್ಥಾಪಿಸಲಾಗಿದೆ. ಎನ್ಆರ್ಎಲ್ಎಂ ಯೋಜನೆ ಮೂಲಕ ೧೨ ಒಕ್ಕೂಟಗಳು ತಾಲೂಕಿನಲ್ಲಿ ಕೆಲಸವನ್ನು ನಿರ್ವಹಿಸುತ್ತಿವೆ. ಇವರು ತಯಾರಿಸುವ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವುಕ್ಕೆ ಸಹಾಯಧನವನ್ನು ನೀಡಲಾಗುತ್ತದೆ.
ಇದರಲ್ಲಿ ಬಿದಿರಿನಿಂದ ತಯಾರಾಗುವ ವಸ್ತುಗಳು, ತೋರಣ, ಹಾರಗಳ ತಯಾರಿಕೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಿಠಾಯಿಗಳು, ಸಿಹಿ ತಿನಿಸುಗಳು, ಗಾಣದಿಂದ ತಯಾರಾಗುವ ಅಡುಗೆ ಎಣ್ಣೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು, ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಉತ್ಪನ್ನಗಳು ಹಾಗೂ ಜನರ ಸಧಭಿರುಚಿಗೆ ಅನುಹುಣವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉತ್ಪನ್ನಗಳ ತಯಾರಿಕೆ ತರಬೇತಿ ನೀಡಲಾಗುತ್ತದೆ.
ಅಲ್ಲದೆ ಇವರ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿ ತಿಂಗಳು ಜನನಿಭಿಡ ಪ್ರದೇಶಗಳಲ್ಲಿ ಸಂತೆಯನ್ನು ಮಾಡಿ ಈ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಿ ಇವರಿಗೆ ಉತ್ತೆಜನ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ನಡೆಸಲು ಸಾಧ್ಯವಾಗುವ ಜೊತೆಗೆ ಆರ್ಥಿಕವಾಗಿ ಸಬಲರಾಗಲು ಇದು ಉತ್ತೇಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರೂ ಸಹ ಇಂತಹ ಉತ್ಪನ್ನಗಳನ್ನು ಖರೀದಿಸಿ ದೇಸಿಯ ವಸ್ತುಗಳ ಖರೀದಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಪಂನ ಸಹಾಯಕ ನಿರ್ದೆಶಕ ರವೀಂದ್ರನಾಥ್ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಒಕ್ಕೂಟದ ರಾಜಮ್ಮ, ಪ್ರೇಮ, ಮಧುಸೂಧನ್, ರವಿ, ವಾಣಿಶ್ರೀ, ಭೂಮಿಕಾ, ಜಯಮ್ಮ, ಮಣಿ, ನಾಗಮ್ಮ ಸೇರಿದಂತೆ ವಿವಿಧ ಮಹಿಳಾ ಒಕ್ಕೂಟಗಳ ಸದಸ್ಯರು ಹಾಜರಿದ್ದರು.