ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಸಂಘಟನೆಗಳನ್ನು ಮಾಡಿಕೊಳ್ಳುವವರು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಗರುಡುಗಂಭದ ಕೆ.ಎಸ್.ಮoಜುನಾಥ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕೆ.ಆರ್.ನಗರ ಮತ್ತು ಹುಣಸೂರು ತಾಲೂಕುಗಳ ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ನಿಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಮುoದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹಿಂದುಳಿದವರು ಮತ್ತು ನೊಂದವರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಕೊಡಿಸಲು ಕಾರ್ಯಯೋಜನೆ ರೂಪಿಸಿಕೊಂಡಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿಕೊಂಡರು.
ನಮ್ಮ ಸಂಘಟನೆ ಎಲ್ಲರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸಲು ಸಿದ್ಧವಾಗಿದ್ದು, ನಮ್ಮೊಂದಿಗೆ ಎಲ್ಲರೂ ಸೇರಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಸಹಕರಿಸುವ ಜೊತೆಗೆ ನಮ್ಮ ಸಂಘದ ಮೂಲ ಉದ್ಧೇಶ ಮತ್ತು ದಿವಸಗಳನ್ನು ಅರಿತು ನಿಮ್ಮಿಂದಾಗುವ ಆರ್ಥಿಕ ಸಹಾಯ ಮಾಡಿ ನೊಂದವರ ನೆರವಿಗೆ ಬರಬೇಕೆಂದು ಮನವಿ ಮಾಡಿದರು.
ಭವಿಷ್ಯದಲ್ಲಿ ನಾವು ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಇದರೊಟ್ಟಿಗೆ ನಾವು ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಕೆಲಸ ಮಾಡಲಿದ್ದು, ಇದಕ್ಕೆ ಎಲ್ಲರೂ ಸಹಾಯ ಮತ್ತು ಆರ್ಥಿಕ ಸಹಕಾರ ನೀಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕು ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷರಾಗಿ ನೇಮಕವಾದ ಕೆ.ಎ.ಮಧು ಮತ್ತು ಹುಣಸೂರು ತಾಲೂಕು ಅಧ್ಯಕ್ಷರಾದ ಅಂಜನಿ ಅವರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಕೀಲ ಎಸ್.ಶಿವರಾಜು, ತಾಲೂಕು ಒಬಿಸಿ ಸಂಘದ ಅಧ್ಯಕ್ಷ ದೆಗ್ಗನಹಳ್ಳಿಸಂತೋಷ್, ಮುಖಂಡರಾದ ಅಜಯ್, ಸಂದೇಶ್, ಆದರ್ಶ, ಮಧು, ಪರಶುರಾಮ್ ಮತ್ತಿತರರು ಹಾಜರಿದ್ದರು.