Friday, September 12, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಕರಿಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ: ಶಾಸಕ ಜಿ.ಡಿ. ಹರೀಶ್ ಗೌಡ

ಶಿಕ್ಷಕರಿಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ: ಶಾಸಕ ಜಿ.ಡಿ. ಹರೀಶ್ ಗೌಡ

ಹುಣಸೂರು: ಶಿಕ್ಷಣ ಇಲ್ಲದೇ ಯಾವುದೇ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಹಾಗೆ ಶಿಕ್ಷಕರಿಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಶಾಸಕ ಜಿ.ಡಿ.ಹರೀಶ್‍ ಗೌಡ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ. ಆವಿಷ್ಕಾರಗಳು ಮನುಷ್ಯನ ಬದುಕಿನ ರೀತಿಯನ್ನು ಬದಲಿಸುತ್ತವೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಆದರೆ ಶಿಕ್ಷಕನಿಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ. ಈ ನೆಲದಲ್ಲಿರುವ ಗುರುಪರಂಪರೆಯ ಸಂಸ್ಕತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿರಿ ಎಂದರು.

ಕಳೆದ ಸಾಲಿನ ಎಸ್‍ ಎಸ್‍ ಎಲ್‍ ಸಿ ಫಲಿತಾಂಶ ಕುಸಿತಕ್ಕೆ ಸಿಸಿ ಕ್ಯಾಮೆರಾ, ವೆಬ್ ಕ್ಯಾಮೆರ ಮುಂತಾದ ಕಾರಣಗಳನ್ನು ಹೇಳುವುದು ಸರಿಯಲ್ಲ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀವು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಹಾಗೆಂದು ಅಂಕಗಳ ಹಿಂದೆಯೇ ಹೋಗಬೇಕೆಂದಿಲ್ಲ. ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳಸಿ. ಸಾಧನೆಗಾಗಿ, ಜೀವನ ಸಾಧನೆಗಾಗಿ ಅವರನ್ನು ಹುರಿದುಂಬಿಸಿ. ತಾಲೂಕಿನ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದನ್ನು ಬಲ್ಲೆ. ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುತ್ತೇನೆ. ಶಿಕ್ಷಕರು ಎದುರಿಸುತ್ತಿರುವ ಟಿಇಟಿ ಕುರಿತಾದ ಸಮಸ್ಯೆ ಬಗ್ಗೆಯೂ ಅರಿತಿದ್ದೇನೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸಲಿದ್ದೇನೆ. ಅಲ್ಲದೇ ದೇಶದ ಉಚ್ಛ ನ್ಯಾಯಾಲಯ ಶಿಕ್ಷಕರ ಟಿಇಟಿ ಸಮಸ್ಯೆ ಕುರಿತಾಗಿ ನೀಡಿರುವ ತೀರ್ಪು ಶಿಕ್ಷಕ ವೃಂದಕ್ಕೆ ಮಾರಕವಾಗಿದ್ದು, ಈ ಕುರಿತು ಕೇಂದ್ರ ಸರ್ಕಾರದ ಗಮನಸೆಳೆಯಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಬಳಿ ಶಿಕ್ಷಕರ ನಿಯೋಗವೊಂದನ್ನು ಕರೆದೊಯ್ಯುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಹೊರತುಪಡಿಸಿ ಮಿಕ್ಕೆಲ್ಲ ಕೆಲಸಗಳನ್ನೂ ಮಾಡುತ್ತಿದ್ದಾರೆ. ನಮ್ಮನ್ನು ಕಲಿಸಲು ಬಿಡಿ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದೇವೆ. ನಲಿ-ಕಲಿ ಮುಂಬರುವ ಸಾಲಿನಲ್ಲಿ ರದ್ದಾಗುವತ್ತ ಹೋರಾಟ ನಡೆಸಿದ್ದೇವೆ. ಈ ನಡುವೆ ಟಿಇಟಿ ಸಮಸ್ಯೆ ಶಿಕ್ಷಕರನ್ನು ಕಾಡುತ್ತಿದ್ದು, ಯುವ ನಾಯಕ ಜಿ.ಡಿ.ಹರೀಶ್‍ ಗೌಡ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ವಿಷಯದ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ದೇಶದ 70 ಲಕ್ಷ ಶಿಕ್ಷಕರ ಭವಿಷ್ಯವನ್ನು ಕಾಪಾಡಲು ಕೋರುತ್ತೇನೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಸರ್ವಪಲ್ಲಿ ರಾಧಾಕೃಷ್ಣನ್‍ ರ ಜೀವನ, ಬದುಕು ಮತ್ತು ಸಾಧನೆಗಳ ಕುರಿತು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚೇತನ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಶಶಿಕುಮಾರ್ ಮಾತನಾಡಿದರು.

ಇದೇ ವೇಳೆ ಪ್ರಸ್ತುತ ಸಾಲಿನಲ್ಲಿ ನಿವೃತ್ತಗೊಂಡ 60 ಶಿಕ್ಷಕರನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿ ಎಸ್‍ ಎಸ್‍ ಎಲ್‍ ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಇದಕ್ಕಾಗಿ ಶಾಸಕ ಹರೀಶ್‍ ಗೌಡ ವೈಯಕ್ತಿಕವಾಗಿ 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಪ್ರೋತ್ಸಾಹಧನ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ರಂಗಸ್ವಾಮಿ, ನಗರಸಭಾಧ್ಯಕ್ಷ ಮಾಲಿಕ್ ಪಾಷಾ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಪಿ.ಹೇಮಲತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಸಿ.ಪ್ರಸನ್ನ, ಉಪಾಧ್ಯಕ್ಷ ಎಚ್.ಬಿ.ಚನ್ನವೀರಪ್ಪ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಲ್ಕುಣಿಕೆ ರಾಘು ಮತ್ತು ಶಿಕ್ಷಕರು ಹಾಜರಿದ್ದರು.

ಶಿಕ್ಷಕರ ಅಶಿಸ್ತಿನ ವರ್ತನೆಗೆ ಬೇಸರ

ವೇದಿಕೆ ಸಮಾರಂಭ ನಡೆಯುತ್ತಿದ್ದ ವೇಳೆಯೇ ಸಭಾಂಗ ಣದಲ್ಲಿ ಇದ್ದ ಶಿಕ್ಷಕರು ಗುಂಪು ಗುಂಪಾಗಿ ಎದ್ದು ಊಟದ ಕಡೆ ತೆರಳಿದ್ದು, ಇದನ್ನು ಕಂಡು ಶಾಸಕ ಜಿ.ಡಿ.ಹರೀಶ್‍ಗೌಡ ಬೇಸರಗೊಂಡು ತಮ್ಮ ಭಾಷಣದ ವೇಳೆ ಶಿಸ್ತು ಕಲಿಸಬೇಕಾದ ನೀವೇ ಅಶಿಸ್ತಿನಿಂದ ನಡೆದುಕೊಂಡರೆ ಮಕ್ಕಳಿಗೆ ಏನು ಹೇಳಿಕೊಡುತ್ತೀರಿ ಎಂದು ಪ್ರಶ್ನಿಸುವ ಮೂಲಕ ಬೇಸರ ಹೊರಹಾಕಿದರು.

RELATED ARTICLES
- Advertisment -
Google search engine

Most Popular