Saturday, September 20, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಕರು ಇನ್ನಷ್ಟು ಸ್ಮಾರ್ಟ್ ಆಗಿ ಕರ್ತವ್ಯ ನಿರ್ವಹಿಸಿ: ಶಾಸಕ ಕೃಷ್ಣಮೂರ್ತಿ

ಶಿಕ್ಷಕರು ಇನ್ನಷ್ಟು ಸ್ಮಾರ್ಟ್ ಆಗಿ ಕರ್ತವ್ಯ ನಿರ್ವಹಿಸಿ: ಶಾಸಕ ಕೃಷ್ಣಮೂರ್ತಿ

ಯಳಂದೂರು: ಇಂದಿನ ಪ್ರಪಂಚ ಸ್ಮಾರ್ಟ್ ಆಗಿದೆ. ಅಂಗೈಯಲ್ಲೇ ಇಡೀ ಜಗತ್ತು ತೆರೆದುಕೊಳ್ಳುವ ಕಾಲವಿದು. ಇಂದಿನ ಮಕ್ಕಳೂ ಸಹ ಇದರಲ್ಲಿ ಹಿಂದೆ ಬಿದ್ದಿಲ್ಲ. ಶಿಕ್ಷಕರಿಗೆ ಗೊತ್ತಿಲ್ಲದ ವಿಚಾರಗಳು ಮಕ್ಕಳು ಪ್ರಶ್ನಿಸಿದರೆ ತಡಬಡಾಯಿಸಬಾಡದು ಹಾಗಾಗಿ ಶಿಕ್ಷಕರೂ ಸಹ ತಂತ್ರಜ್ಞಾನದ ಸಂಪೂರ್ಣ ಲಾಭವನ್ನು ಪಡೆದುಕೊಂಡು ಸ್ಮಾರ್ಟ್ ಆಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.

ಅವರು ಶನಿವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಪ್ರತಿಭಾವಂತರು ಇಂದು ವಿದೇಶಗಳಲ್ಲಿ ಹೆಚ್ಚಾಗಿದ್ದಾರೆ. ಇಂತಹ ಪ್ರತಿಭಾವಂತರನ್ನು ರೂಪಿಸಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಸುಶಿಕ್ಷಿತ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ೪ ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಇದಕ್ಕೆ ಪರೀಕ್ಷೆ ನಡೆಸಿದ್ದರೂ ಸಹ ಶಿಕ್ಷಕರು ಆಯ್ಕೆಯಾಗುತ್ತಿಲ್ಲ. ಹಾಗಾಗಿ ನೆಟ್, ಸ್ಲೇಟ್, ಟಿಇಟಿಯಲ್ಲಿ ಶಿಕ್ಷಕ ತರಬೇತಿ ಪಡೆದವರು ಇನ್ನಷ್ಟು ಕಠಿಣವಾಗಿ ಅಭ್ಯಾಸ ಮಾಡಬೇಕು ನಮ್ಮ ಕ್ಷೇತ್ರಕ್ಕೆ ೪ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕೇಳಿಕೊಂಡಿದ್ದು ಶೀಘ್ರದಲ್ಲೇ ಇವು ಕಾರ್ಯಾರಂಭ ಮಾಡಲಿದೆ ಎಂದರು.


ಕೆಎಸ್‌ಒಯು ಸಹ ಪ್ರಾಧ್ಯಾಪಕ, ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಲಿಂಗ ಅಸಮಾನತೆಮ ಸಾಮಾಜಿಕ, ಆರ್ಥಿಕ ಅಸಮಾನತೆ ವಿರುದ್ಧ ಪ್ರತಿ ಸಮಾಜ ಸುಧಾರಕರೂ ಹೋರಾಡಿದ್ದಾರೆ. ಫುಲೆ ದಂಪತಿ ದೇಶದ ಪ್ರಥಮ ಮಹಿಳಾ ಶಾಲೆಗಳನ್ನು ತೆರದು ಶಿಕ್ಷಣನ ನೀಡಿದ ಸಾಧಕರಾಗಿದ್ದಾರೆ. ಅಕ್ಷರ ಕ್ರಾಂತಿಗೆ ನಾಂದಿ ಹಾಕಿದವರಾಗಿದ್ದಾರೆ. ಇವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ ಇದನ್ನರಿತು ಬೋಧಿಸುವ ಕೆಲಸವನ್ನು ಮಾಡಬೇಕು. ಶಿಕ್ಷಕರ ನಡೆ ನುಡಿಗಳು ಅಧ್ಭುತವಾಗಿರಬೇಕು. ಎಲ್ಲರಿಗೂ ನಾವು ಆದರ್ಶವಾಗಿರಬೇಕು. ನಮ್ಮಲ್ಲಿ ಮೊದಲು ಬದಲಾವಣೆ ತಂದುಕೊಂಡು ನಂತರ ನಾವು ಕೆಲಸವನ್ನು ಮಾಡಬೇಕು ಎಂದು ಕಿವಿ ಮಾತು ಹೇಳಿದರು.


ಖಾಸಗಿ ಶಾಲೆ ಥಳಿತ ಪ್ರಕರಣ ಮರುಕಳಿಸದಿರಲಿ: ತಹಸೀಲ್ದಾರ್ ಎಸ್.ಎಲ್ ನಯನ ಮಾತನಾಡಿ, ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳಿಗೆ ಥಳಿಸಿರುವ ಪ್ರಕರಣ ವಿಷಾಧನೀಯವಾಗಿದೆ. ಮಕ್ಕಳು ಆಟದ ವಸ್ತುಗಳಲ್ಲ. ಇವರ ಜೊತೆ ಅನುಚಿತವಾಗಿ ವರ್ತಿಸಬೇಡಿ. ಇವರನ್ನು ದಂಡಿಸಬೇಡಿ, ಸೂಕ್ಷ್ಮಮತಿಗಳಾಗಿ ಕೆಲಸವನ್ನು ಮಾಡಿ, ಮಕ್ಕಳಿಗೆ ದಂಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಶಿಕ್ಷಕರನ್ನು ಪೂಜನೀಯ ಭಾವದಿಂದ ಎಲ್ಲರೂ ನೋಡುತ್ತಾರೆ ಇದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಪಪಂ ಸದಸ್ಯರಾದ ರಂಗನಾಥ, ಬಿ. ರವಿ, ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಎಸ್. ಪ್ರಭುಪ್ರಸಾದ್ ತಾಪಂ ಆಡಳಿತಾಧಿಕಾರಿ ಎಸ್.ಎಸ್. ಅಬೀದ್, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಬಿಇಒ ಮಾರಯ್ಯ ಬಿಆರ್‌ಸಿ ಆರ್. ನಂಜುಂಡಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಶಾಂತರಾಜು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ವೈ.ಎಂ. ಮಂಜುನಾಥ್, ಸೆಲಿನಾ, ಚಂದ್ರಮ್ಮ, ಮುರುಳಿಧರ್ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular