ಯಳಂದೂರು: ಪೌರ ಕಾರ್ಮಿಕರು ದಿನನಿತ್ಯ ತಮ್ಮ ಕಾಯಕದಲ್ಲಿ ಪರರ ಹಿತಕ್ಕಾಗಿ ದುಡಿಯುವ ವರ್ಗವಾಗಿದೆ. ತಮ್ಮ ಆರೋಗ್ಯ, ಹಿತವನ್ನು ಬಿಟ್ಟು ಬೇರೆಯವರ ಕಾಯಕ ಮಾಡುವ ಇಂತಹ ವ್ಯಕ್ತಿಗಳನ್ನು ಸನ್ಮಾನಿಸುವುದು ಹೆಮ್ಮೆಯ ವಿಚಾರ ಎಂದು ಯಳಂದೂರು ರೋಟರಿ ಸಂಸ್ಥೆಯ ಗ್ರೀನ್ ವೇ ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಅಭಿಪ್ರಾಯಪಟ್ಟರು.
ಅವರು ಪಟ್ಟಣ ಬಳೇಪೇಟೆಯ ಬಣಜಿಗರ ಶ್ರೀ ರಾಮಮಂದಿರದಲ್ಲಿ ಶುಕ್ರವಾರ ರೋಟರಿ ಗ್ರೀನ್ ವೇ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂಸ್ಥೆ ತಾಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆಯನ್ನು ಮಾಡುತ್ತಿದೆ. ಅಲ್ಲದೆ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಆದರೆ ಇಂದು ನಡೆಯುತ್ತಿರುವ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮವು ವಿಶಿಷ್ಟವಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಪಟ್ಟಣ ಪಂಚಾಯಿತಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ. ಇವರು ನಿತ್ಯ ಜನರು ಎಚ್ಚರಗೊಳ್ಳುವ ಮೊದಲೇ ತಮ್ಮ ಕಾಯಕವನ್ನು ಆರಂಭಿಸುತ್ತಾರೆ. ಪಟ್ಟಣವನ್ನು ಶುಚಿಯಾಗಿಡುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ನಮ್ಮ ಪಟ್ಟಣ ಚಿಕ್ಕದಾಗಿದ್ದರೂ ಪ್ರತಿನಿತ್ಯ ಇವರ ಪ್ರಾಮಾಣಿಕ ಸೇವೆಯಿಂದ ಇಡೀ ಪಟ್ಟಣ ಸ್ವಚ್ಚ, ಸುಂದರವಾಗಿ ಕಾಣುತ್ತಿದೆ. ಇದಕ್ಕೆ ಇವರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ. ಇಂತಹ ಕಾಯಕ ತಪಸ್ವಿಗಳನ್ನು ಸನ್ಮಾನಿಸುವುದು ನಮ್ಮ ಸಂಸ್ಥೆಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದರು.
ಮಾಜಿ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪುಟ್ಟರಾಜು, ಸದಸ್ಯರಾದ ನಟರಾಜು, ರಿತೇಷ್, ಗೌಡಹಳ್ಳಿ ರವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಹಾರ ತುರಾಯಿ, ಫಲತಾಂಬೂಲ ನೀಡಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರಾದ ವೈ.ಡಿ. ಸೂರ್ಯನಾರಾಯಣ, ಬಂಗಾರಸ್ವಾಮಿ, ಶಿವಕುಮಾರ, ಮಹದೇವ, ಬಿ.ಟಿ. ಶ್ರೀನಿವಾಸ, ವೈ.ಕೆ.ಮೋಳೆ ನಾಗರಾಜು ಸೇರಿದಂತೆ ಅನೇಕರು ಇದ್ದರು.