ಗೋಕಾಕ್ : ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ ನಸುಕಿನ ಜಾವ ಸುಮಾರು ೪ ಘಂಟೆ ಸುಮಾರಿಗೆ ಅನಾರೋಗ್ಯದಿಂದ ೧೦ನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಸತೀಶ್ ಬಾಗನ್ನವರ (೧೬) ಮೃತಪಟ್ಟಿದ್ದರು. ತಮ್ಮನ ಆರೋಗ್ಯದಲ್ಲಿ ಏರುಪೇರುಉಂಟಾಗಿ ಬದುಕುಳಿಯುವುದಿಲ್ಲ ಎಂಬ ಸುದ್ದಿ ಅಣ್ಣ ಬಸವರಾಜ ಬಾಗನ್ನವರ (೨೪)ಗೆ
ತಿಳಿದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮ ಸತೀಶ್ ಬಾಗನ್ನವರ ಸಾವಿನ ಸುದ್ದಿ ಬಂದಿದೆ. ಈ ವಿಚಾರ ಕೇಳಿ ಬಸವರಾಜ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೈದುನ ಮತ್ತು ಗಂಡನ ಸಾವಿನ ಸುದ್ದಿ ಕೇಳಿ ಬಸವರಾಜ ಬಾಗನ್ನವರ ಗರ್ಭಿಣಿ ಪತ್ನಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಸತೀಶ್ ೧೦ನೇ ತರಗತಿಯಲ್ಲಿ ಓದುತ್ತಿದ್ದನು. ಹಾಗೂ ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು.