ಬೆಂಗಳೂರು : ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ನ.10ರ ವರೆಗೆ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದೆ. ಇನ್ನು ಒಂದು ವಾರದ ಅಂತರದಲ್ಲಿ ಬಸವನಗುಡಿ ಕಡಲೆಕಾಯಿ ಪರಿಷೆ ಕೂಡ ನಡೆಯಲಿದೆ.
ಐತಿಹಾಸಿಕ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂಭಾಗ ನಡೆಯುವ ಈ ಕಡಲೆಕಾಯಿ ಪರಿಷೆಗೆ ಐತಿಹಾಸಿಕ ವಿಶೇಷತೆ ಇದೆ. ಇಂದು ಸಂಜೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಉದ್ಘಾಟನೆ ಮಾಡಲಿದ್ದಾರೆ.
ಬಸವನಗುಡಿ ಕಡಲೆಕಾಯಿ ಪರಿಷೆ ನ.17 ರಂದು ಆರಂಭ ಆದರೆ 21ನೇ ತಾರೀಖಿನವರೆಗೂ ನಡೆಯಲಿದೆ. ಇದಕ್ಕಾಗಿ ಮುಜರಾಯಿ ಇಲಾಖೆ ಅಗತ್ಯ ತಯಾರಿ ಮಾಡಿಕೊಂಡಿದೆ. ಎರಡು ಕಡಲೆಕಾಯಿ ಪರಿಷೆಯಲ್ಲೂ ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿದೆ.
ಇದರಿಂದ ಪರಿಷೆಗೆ ಬರುವಂತಹ ಸಾರ್ವಜನಿಕರು ಮನೆಯಿಂದಲೇ ಚೀಲವನ್ನ ತೆಗೆದುಕೊಂಡು ಬರಬೇಕಾಗುತ್ತದೆ. ಈ ಸ್ಥಳದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ, ಪೊಲೀಸ್ ಭದ್ರತೆ, ತುರ್ತು ಚಿಕಿತ್ಸಾ ವಾಹನ ನಿಯೋಜನೆ ಮಾಡಿದ್ದು, ಆರೋಗ್ಯ , ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.



