ಮೈಸೂರು: ನಗರದ ಮೇಟಗಳ್ಳಿಯಲ್ಲಿರುವ ಪರಿವರ್ತನಾ ಕಾನೂನು ಕಾಲೇಜು ವತಿಯಿಂದ ಶನಿವಾರ ಪಾಂಡವಪುರ ತಾಲೂಕಿನ ಕುಂತಿಬೆಟ್ಟದ ಸಾಹಸಿ ಚಾರಣ ಆಯೋಜಿಸಲಾಗಿತ್ತು. ಮೈಸೂರಿನಿಂದ ಕುಂತಿಬೆಟ್ಟಕ್ಕೆ ತೆರಳಿದ ಐವತ್ತಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳು ಪ್ರಾಚಾರ್ಯರು ಹಾಗು ಅಧ್ಯಾಪಕರ ಜೊತೆಗೂಡಿ ಸಾಹಸಿ ಚಾರಣದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರೊ. ವಾಸು ಅವರು ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಆರೋಗ್ಯದ ದೃಷ್ಠಿಯಿಂದ ನಿತ್ಯ ವ್ಯಾಯಾಮ ಮಾಡುವುದು, ಬಿರುಸಿನ ನಡಿಗೆ ನಡೆಯುವುದು, ಪ್ರಕೃತಿಯ ಜೊತೆ ಕಾಲಕಳೆಯುವುದು ಸೂಕ್ತ. ಇದರಿಂದ ದೈಹಿಕ ಹಾಗು ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದರು.
ವಿದ್ಯಾರ್ಥಿಗಳು ಆಗ್ಗಿಂದ್ದಾಗ್ಗೆ ಪ್ರಕೃತಿ ಚಾರಣ ನಡೆಸುವುದು, ಬೆಟ್ಟ ಹತ್ತುವುದನ್ನ ಹವ್ಯಾಸವಾಗಿ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ಗೋಕುಲ್ ಅವರು ಪ್ರಕೃತಿ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಮನುಷ್ಯ ಹಾಗು ಪ್ರಕೃತಿ ಸಂಬಂಧ ದೊಡ್ಡದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಪರಿವರ್ತನಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.



