ವರದಿ: ಎಡತೊರೆ ಮಹೇಶ್
ಹೆಚ್.ಡಿ. ಕೋಟೆ: ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ನಿಯಮ 2011ರನ್ವಯ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನಿರ್ಮಲತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸಲು ಪುರಸಭೆ ವತಿಯಿಂದ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಉಚಿತವಾಗಿ 100 ನೋಂದಣಿಗಳನ್ನು ಮಾಡಲಾಗುತ್ತಿದೆ.
ಇಂದು ಆಹಾರ ಸುರಕ್ಷತಾ ಅಧಿಕಾರಿಗಳು ಹೆಚ್.ಡಿ. ಕೋಟೆ ಪಟ್ಟಣದ ಬೀದಿಬದಿ ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್ ಅವರು ಮಾತನಾಡಿ, “ಎಲ್ಲಾ ಬೀದಿಬದಿ ಫಾಸ್ಟ್ಫುಡ್ ವ್ಯಾಪಾರಿಗಳು ಕಡ್ಡಾಯವಾಗಿ ಆಹಾರ ಪರವಾನಗಿ ಪಡೆಯಬೇಕು ಮತ್ತು ವ್ಯಾಪಾರ ಸ್ಥಳವನ್ನು ಸದಾ ಶುಚಿಯಾಗಿ ಇಟ್ಟುಕೊಳ್ಳಬೇಕು,” ಎಂದು ಹೇಳಿದರು.
ಅವರು, ಅಡುಗೆ ಮಾಡಿದ ನಂತರ ಆಹಾರವನ್ನು ಮುಚ್ಚಿಡುವುದು, ಜನರಿಗೆ ಬಿಸಿ ನೀರನ್ನೇ ಪೂರೈಕೆ ಮಾಡುವುದು, ಪಾತ್ರೆಗಳನ್ನು ಶುದ್ಧ ನೀರಿನಿಂದ ತೊಳೆಯುವುದು ಹಾಗೂ ಪ್ಲಾಸ್ಟಿಕ್ ಕವರ್ಗಳ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದರು. ತರಕಾರಿ ವ್ಯಾಪಾರಿಗಳು ಕೊಳೆತ ತರಕಾರಿಗಳನ್ನು ಪ್ರತ್ಯೇಕವಾಗಿ ಶೇಖರಿಸಿ ಪುರಸಭೆಯ ವಾಹನಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.
ಮಾಂಸ ಮಾರಾಟದ ಅಂಗಡಿಗಳಿಗೂ ಭೇಟಿ ನೀಡಿ, ಶುದ್ಧ ಮಾಂಸವನ್ನೇ ಮಾರಾಟ ಮಾಡಲು ಸೂಚನೆ ನೀಡಲಾಯಿತು. ನಿಯಮ ಉಲ್ಲಂಘಿಸಿದ ಕೆಲವು ವ್ಯಾಪಾರಿಗಳಿಗೆ ನೋಟಿಸ್ ಹಾಗೂ ದಂಡ ವಿಧಿಸಲಾಯಿತು. ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ, ರಮಾಣಿ, ಪ್ರತಾಪ್ ಮತ್ತು ಇತರರು ಹಾಜರಿದ್ದರು.



