ಬೆಳಗಾವಿ: ಕಲಬುರಗಿ ಜಿಲ್ಲೆಯ ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮೃತದೇಹವನ್ನು ಅವರ ಹುಟ್ಟೂರಾದ ರಾಮದುರ್ಗ ಪಟ್ಟಣದ ನವಿಪೇಟಕ್ಕೆ ತರಲಾಗಿದೆ.
ಕಲುಬರಗಿಯಿಂದ ರಾಮದುರ್ಗಕ್ಕೆ ತಲುಪಿದ ಮೃತದೇಹವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಸ್ವೀಕರಿಸಿದರು. ರಾಮದುರ್ಗದ ಪಂಚಗಟ್ಟಿ ಮಠದಲ್ಲಿ ಅಪರಾಹ್ನ 2ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಹಾಂತೇಶ ಬೀಳಗಿಯವರ ಅಕಾಲಿಕ ಮೃತ್ಯು ಕಾರಣ ಊರಿಡೀ ಶೋಕಾತಪ್ತವಾಗಿದೆ. ಕುಟುಂಬಸ್ಥರ ಆಕ್ರಂದನ, ಹಾಗೂ ಗಣ್ಯರಿಂದ ಸಂತಾಪ ಸೂಚನೆಗಳು ವ್ಯಕ್ತವಾಗುತ್ತಿವೆ.
ಸಾರ್ವಜನಿಕ ದರ್ಶನದ ಬಳಿಕ, ಹಲಗತ್ತಿ ಸಮೀಪದ ಫಾರ್ಮ್ ಹೌಸ್ ನಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಜೇವರ್ಗಿಯ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ, ಅವರ ಚಿಕ್ಕಪ್ಪನ ಮಕ್ಕಳಾದ ಶಂಕರ್ ಬೀಳಗಿ ಮತ್ತು ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾಂತೇಶ ಬೀಳಗಿ ಅವರ ಕಾರು ಚಾಲಕ ರಾಜು ಹಾಗೂ ಈರಣ್ಣ ಶಿರಸಂಗಿ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಪೈಕಿ ಈರಣ್ಣ ಶಿರಸಂಗಿ ಚಿಕಿತ್ಸೆ ಫಲಿಸದೇ ಮಂಗಳವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.



