ಮೈಸೂರು : ವಿಜಯನಗರದಲ್ಲಿ ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಇತ್ತೀಚೆಗೆ ಆಚರಿಸಲಾಯಿತು
ಪುಸ್ತಕದ ಮನೆ ಖ್ಯಾತಿಯ ಅಂಕೇಗೌಡ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕನ್ನಡ ಭಾಷೆ ತನ್ನದೇ ಆದ ಗೌರವ ಮೌಲ್ಯ ಹೊಂದಿದೆ. ಇಂತಹ ಕನ್ನಡವನ್ನು ಉಳಿಸಿ, ಬೆಳೆಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ ಪ್ರೇಮ ನಿರಂತರವಾಗಿ ಇರಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಲಯನ್ ಯು. ಬಿ. ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗರಾಜ್ ಬೈರಿ ಮತ್ತು ಸುಗಮ ಸಂಗೀತ ಪರಿಷತ್ ಪ್ರಶಸ್ತಿಗೆ ಬಾಜನರಾದ ಎ ಡಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಮಾತನಾಡುವ ಗೊಂಬೆ ಪ್ರದರ್ಶನ ಕಾವ್ಯ ನಡೆಸಿಕೊಟ್ಟರು. ಬಡಾವಣೆಯ ನಿವಾಸಿಗಳಿಂದ ಮನರಂಜನೆ ಹಾಗೂ ಬಡಾವಣೆಯ ಸಾಧಕ ನಿವಾಸಿಗಳಿಗೆ ಸನ್ಮಾನಿಸಲಾಯಿತು. ಬಡಾವಣೆಯ ನಿವಾಸಿಗಳಿಗೆ ಲಕ್ಕಿ ಡಿಪ್ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಿದ್ದು ಅದರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಎಂ.ಕೆ. ನಂಜಯ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ, ಉಪಾಧ್ಯಕ್ಷ ವೆಂಕಟೇಗೌಡ, ಜಂಟಿ ಕಾರ್ಯದರ್ಶಿ ಅಲುಮೇಲು ಪ್ರದೀಪ್, ಖಜಾಂಚಿ ಶ್ರೀನಿವಾಸ್ ಮತ್ತು ಮಾಜಿ ಅಧ್ಯಕ್ಷ ನರಸೇಗೌಡ ಹಾಗೂ ನಿರ್ದೇಶಕರು ಹಾಗೂ ನೂರಾರು ನಿವಾಸಿಗಳು ಹಾಜರಿದ್ದರು.



