ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಸುಗಮವಾಗಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸುವರ್ಣ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿ, ಅಧಿವೇಶನದ ಸಿದ್ಧತೆ ಪರಿಶಿಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಳೆದ ವರ್ಷ ಉತ್ತಮವಾಗಿ ಅಧಿವೇಶನ ನಡೆದಿತ್ತು. ಈ ಬಾರಿಯೂ ಯಾವುದೇ ಸಮಸ್ಯೆಯಾಗದು. ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದೇವೆ’ ಎಂದರು.
‘ಅಧಿವೇಶನ ಹಿನ್ನೆಲೆಯಲ್ಲಿ ವಸತಿಗಾಗಿ 3 ಸಾವಿರ ಕೊಠಡಿ ಕಾಯ್ದಿರಿಸಿದ್ದೇವೆ. 700 ವಾಹನ ಬಳಸಿಕೊಳ್ಳಲಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದ ಬೃಹತ್ ಆಕಾರದ ರಾಷ್ಟ್ರಧ್ವಜ ಪ್ರದರ್ಶಿಸಲಿದ್ದೇವೆ’ ಎಂದು ಹೇಳಿದರು.
ಪಾರ್ಕ್ ಉದ್ಘಾಟನೆ
‘ಲೋಕೋಪಯೋಗಿ ಇಲಾಖೆ ₹4.5 ಕೋಟಿ ವೆಚ್ಚದಲ್ಲಿ ಸೌಧದ ಆವರಣದಲ್ಲಿ ನಿರ್ಮಿಸಿದ ಪಾರ್ಕ್ ಅನ್ನು ಇದೇ ಅಧಿವೇಶನದಲ್ಲಿ ಉದ್ಘಾಟಿಸಲಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ವಿವಿಧ ರೀತಿಯ ಕಾರಂಜಿ ಒಳಗೊಂಡ ಪಾರ್ಕ್ಗೆ ಜನರು ಭೇಟಿ ನೀಡಿ ನಿರಾಳರಾಗಬಹುದು’ ಎಂದು ತಿಳಿಸಿದರು.
ಪ್ರತಿಭಟನೆ ತಗ್ಗುವ ನಿರೀಕ್ಷೆ
‘ಅಧಿವೇಶನ ವೇಳೆ ಪ್ರತಿಭಟನೆ ನಡೆಸುವವರಿಗಾಗಿ ಎರಡು ಕಡೆ ವ್ಯವಸ್ಥೆ ಮಾಡಿದ್ದೇವೆ. ಮೆಕ್ಕೆಜೋಳ, ಕಬ್ಬು ಬೆಳೆಯುವವರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ವಿವಿಧ ಸಂಘ-ಸಂಸ್ಥೆಗಳ ಜತೆಗೆ ನಗರ ಪೊಲೀಸ್ ಆಯುಕ್ತರು ಸಭೆ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಪ್ರತಿಭಟನೆಗಳ ಸಂಖ್ಯೆ ತಗ್ಗುವ ನಿರೀಕ್ಷೆ ಇದೆ’ ಎಂದರು.
‘ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಯಾರೂ ಪ್ರತಿಭಟನೆ ನಡೆಸುವ ಮುನ್ನ, ಜಿಲ್ಲಾಧಿಕಾರಿ ಕಚೇರಿ ಮತ್ತು ನಗರ ಪೊಲೀಸ್ ಕಮಿಷನರ್ ಕಚೇರಿಗೆ ತಿಳಿಸಬೇಕು’ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಹಾಜರಿದ್ದರು.
‘ಮಹಾಮೇಳಾವ್ಗೆ ಅನುಮತಿ ಕೊಡುವುದಿಲ್ಲ’
‘ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಯಾವ ಕಾರಣಕ್ಕೂ ಅನುಮತಿ ಕೊಡುವುದಿಲ್ಲ. ಒಂದುವೇಳೆ ಮಹಾಮೇಳಾವ್ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.



