ಬೆಂಗಳೂರು : ಬೆಂಗಳೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ಮುಸ್ಲಿಂ ಯುವಕ, ಲೈಂಗಿಕ ದೌರ್ಜನ್ಯ ಮಾಡಿದ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಕಳೆದ ಮಾರ್ಚ್ನಲ್ಲಿಯೇ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಉಸ್ಮಾನ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದಲ್ಲದೇ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನಾಭರಣ ದೋಚಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ದೈಹಿಕ ಮತ್ತು ಮಾನಸಿಕ ನೋವಿಗೊಳಗಾದ ಯುವತಿಯು 9 ತಿಂಗಳ ಹಿಂದೆಯೇ ಪೊಲೀಸರ ಮೊರೆ ಹೋಗಿದ್ದು, ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿದು ಬಂದಿದೆ.
ಸ್ನೇಹಿತರಿಂದ ಯುವತಿಗೆ ಪರಿಚಯಗೊಂಡ ಉಸ್ಮಾನ್, ಸಂತ್ರಸ್ತೆಯನ್ನು ಪ್ರೀತಿಯ ಜಾಲಕ್ಕೆ ಬೀಳಿಸಿದ್ದ. ನಂತರ ಇಬ್ಬರೂ ಒಂದೂವರೆ ವರ್ಷಗಳ ಕಾಲ ಲಿವಿನ್ ಸಂಬಂಧದಲ್ಲಿದ್ದರು. ಈ ವೇಳೆ ಯುವತಿಯ ಖಾಸಗಿ ಫೋಟೋಗಳನ್ನು ತೆಗೆದಿದ್ದ ಆರೋಪಿ, ಯುವತಿಯು ಆತನೊಂದಿಗೆ ಸಂಬಂಧ ಕಡಿತಗೊಳಿಸಲು ಮುಂದಾದಾಗ ಆ ಖಾಸಗಿ ಫೋಟೋಗಳನ್ನು ಪಾಲಕರಿಗೆ ತೋರಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಇದೇ ವೇಳೆ ಆರೋಪಿಯು ಯುವತಿಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿದ್ದ.
ಇದಾದ ಕೆಲ ತಿಂಗಳ ನಂತರ ವ್ಯಾಪಾರ ಮಾಡುವುದಾಗಿ ಹೇಳಿದ ಆರೋಪಿಯು ಯುವತಿಯಿಂದ ಹಣ ಕೇಳಿದ್ದ. ಆಕೆಯೂ ತನ್ನ ತಾಯಿ ಮತ್ತು ಸ್ನೇಹಿತರಿಂದ 12.2 ಲಕ್ಷ ರೂ. ಹಣ ಪಡೆದು ಆತನಿಗೆ ನೀಡಿದ್ದರು. ಆರೋಪಿಯು ಮತ್ತೊಮ್ಮೆ 2024ರ ಡಿಸೆಂಬರ್ನಲ್ಲಿ ಹಣ ಕೇಳಿದಾಗ ಸಂತ್ರಸ್ತೆ 2 ಲಕ್ಷ ರೂ. ಬೆಲೆ ಬಾಳುವ 14.5 ಗ್ರಾಂನ ಚಿನ್ನಾಭರಣವನ್ನೂ ನೀಡಿದ್ದರು. ಜನವರಿಯ ಒಳಗಾಗಿ ಹಣ ಮತ್ತು ಚಿನ್ನ ಹಿಂದಿರುಗಿಸುತ್ತೇನೆಂದು ಹೇಳಿದ ಉಸ್ಮಾನ್ ವಾಪಾಸ್ ಮಾಡದಾಗ ಯುವತಿ ಪೊಲೀಸರ ಮೊರೆ ಹೋಗಿದ್ದಾರೆ.
ಉಸ್ಮಾನ್ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕುವುದಲ್ಲದೆ, ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ದೆಹಲಿ ಪ್ರಕರಣದಂತೇ ನಿನ್ನನ್ನು ತುಂಡು-ತುಂಡು ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದ ಉಸ್ಮಾನ್ ವಿರುದ್ಧ ಮಾರ್ಚ್ ತಿಂಗಳಲ್ಲಿ ಸದ್ಗುಂಟೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದರಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು.



