ತುಮಕೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಸ್ವಲ್ಪ ತಣ್ಣಗಾಗಿರುವ ವೇಳೆ ಕೆ.ಎನ್. ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದು, ಡಿ.ಕೆ. ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು, ಇನ್ನೊಬ್ಬರಿಗೆ ಅವಕಾಶ ಕೊಡಲಿ. ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎನ್.ರಾಜಣ್ಣ ಅವರು, ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತ ಸಂಪೂರ್ಣ ಅಪೇಕ್ಷೆ ಪಡೋನೂ ಅಲ್ಲ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ತಿದ್ದುಪಡಿ ಜಾರಿಯಾದರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ ಎಂದು ತಾವು ತಂದ ಕ್ರಾಂತಿಕಾರಿ ಬದಲಾವಣೆಗಳನ್ನು ಈ ವೇಳೆ ಸ್ಮರಿಸಿದ್ದಾರೆ.
ಇನ್ನೂ ಸಿಎಂ ಮತ್ತು ಡಿಸಿಎಂ ದುಬಾರಿ ವಾಚ್ಗಳ ಕುರಿತು ವಿರೋಧ ಪಕ್ಷದ ಟೀಕೆಯ ಬಗ್ಗೆ ಮಾತನಾಡಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡೋಕೆ ಬೇರೆ ವಿಚಾರ ಇಲ್ಲ. ವಾಚ್, ಊಟದ ಬಗ್ಗೆ ಆರೋಪ ಮಾಡುತ್ತಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ಗೆ ನೋಟಿಸ್ ಬಂದಿರುವ ಬಗ್ಗೆ ಪ್ರಶ್ನಿದಾಗ, ಆ ವಿಚಾರ ನನಗೂ ಗೊತ್ತಾಗಿದೆ.ಆದರೆ ಏನಕ್ಕೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ನನಗೂ ಇಲ್ಲ. ಅವರದ್ದು 128 ಕೇಸ್ಗಳು ಇವೆ. ಅದರಲ್ಲಿ ಯಾವುದಕ್ಕೆ ಕೊಟ್ಟಿದ್ದಾರೆ ಯಾರಿಗೆ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾರೆ.



