ಹೊಸದಿಲ್ಲಿ: ಕಾಂಗ್ರೆಸ್ ಎಂಬುದೇ ಒಂದು ಸಿದ್ಧಾಂತ ಮತ್ತು ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಪಾದಿಸಿದರು.
ಈ ಬಗ್ಗೆ ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನವಾದ ಭಾನುವಾರ ದಿಲ್ಲಿಯಲ್ಲಿ ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಥೆ ಮುಗಿದಿದೆ ಎನ್ನುವವರಿಗೆ ಸ್ಪಷ್ಟವಾಗಿ ಒಂದು ಮಾತು ಹೇಳಲು ಬಯಸುತ್ತೇನೆ. ನಮ್ಮ ಶಕ್ತಿ ಕುಂದಿರಬಹುದು. ಆದರೆ, ನಮ್ಮ ಬೆನ್ನುಮೂಳೆ ಇನ್ನೂ ನೇರವಾಗಿಯೇ ಇದೆ. ನಾವು ಸಂವಿಧಾನದೊಂದಿಗೆ, ಜಾತ್ಯತೀತ ಮೌಲ್ಯಗಳೊಂದಿಗೆ, ಬಡವರ ಹಕ್ಕುಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಾವು ಅಧಿಕಾರದಲ್ಲಿಇಲ್ಲದೇ ಇರಬಹುದು. ಆದರೆ ಸಿದ್ಧಾಂತಗಳನ್ನು ಬದಿಗೊತ್ತಿ ಚೌಕಾಶಿ ಮಾಡುವುದಿಲ್ಲ, ಎಂದು ಖರ್ಗೆ ಗುಡುಗಿದರು.
ಅಲ್ಲದೆ ಭಾರತ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಲು ಕಾಂಗ್ರೆಸ್ನ ಅಪ್ರತಿಮ ನಾಯಕರು ನೀಡಿದ ಕೊಡುಗೆ ಕಾರಣವಾಗಿದೆ ಎಂಬುದನ್ನು ಮರೆಯಬಾರದು ಎಂದರಲ್ಲದೆ, ಕಾಂಗ್ರೆಸ್ ಪಕ್ಷವು ಎಂದಿಗೂ ಧರ್ಮದ ಹೆಸರಿನಲ್ಲಿ ಮತ ಕೇಳಿಲ್ಲ, ಮಂದಿರ-ಮಸೀದಿ ಹೆಸರಲ್ಲಿ ಕೋಮುವಾದಿಗಳ ನಡುವೆ ದ್ವೇಷ ಭಾವನೆ ಬಿತ್ತಿಲ್ಲ. ಕಾಂಗ್ರೆಸ್ ಧರ್ಮವನ್ನು ಕೇವಲ ನಂಬಿಕೆಯಾಗಿ ಉಳಿಸಿಕೊಂಡಿದ್ದರೆ, ಕೆಲವರು ಅದನ್ನು ರಾಜಕೀಯವಾಗಿ ಪರಿವರ್ತಿಸಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಇನ್ನೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 140 ವರ್ಷಗಳ ವೈಭವದ ಇತಿಹಾಸವು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಸಾಹಸಗಾಥೆಯನ್ನು ನಿರೂಪಿಸುತ್ತದೆ ಎಂದರು.



