ಬೆಂಗಳೂರು: ಕೋಗಿಲು ಫಕೀರ್ ಬಡಾವಣೆಯ ಸಂತ್ರಸ್ತರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡಲು ಸರ್ಕಾರ ಮುಂದಾಗಿರುವ ಮೂಲಕ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಗಿಲು ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೂಡಾ ಪ್ರತಿಕ್ರಿಯೆ ನೀಡಿದೆ. ಹಾಗಾದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆ ಕರ್ನಾಟಕ ಕೈಜೋಡಿಸಿದ್ಯಾ? ಎಂದು ರಾಜ್ಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒತ್ತಡದ ರಾಜಕಾರಣ ಹಾಗೂ ತುಷ್ಟೀಕರಣ ರಾಜಕಾರಣದಿಂದ ಹೀಗಾಗುತ್ತಿದೆ. ಎಲ್ ಡಿ ಎಫ್ ಹಾಗೂ ಯುಡಿಎಫ್ ನಡುವಿನ ಸ್ಪರ್ಧೆಗೆ ಕರ್ನಾಟಕ ಬಲಿಯಾಗುತ್ತಿದ್ದು, ಕೇರಳದಲ್ಲಿ ಅಲ್ಪಸಂಖ್ಯಾತರ ಓಟು ಪಡೆಯಲು ಕರ್ನಾಟಕ ಬಲಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಈ ವೇಳೆ ಕರ್ನಾಟಕದಲ್ಲಿ ಎಸ್ಐಆರ್ ಜಾರಿಯಾದಗ ಮಾತ್ರ ಅಕ್ರಮ ವಲಸಿಗರು ಯಾರು ಎಂಬುದು ಸಾಬೀತು ಆಗುತ್ತದೆ ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯದಲ್ಲಿ ಯಾರ ಸರ್ಕಾರ ಯಾರಿಂದ ಹಾಗೂ ಯಾರಿಗಾಗಿ ನಡೆಯುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಸರ್ಕಾರವನ್ನು ನಿಯಂತ್ರಣ ಮಾಡುವ ಮೂಗುದಾರ ಎಲ್ಲಿದೆ. ಕೆಸಿ ವೇಣುಗೋಪಾಲ್ ಮೂಗು ತೋರಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರ ಹೇಗೆ ನಡೆಸಬೇಕು ಎಂಬ ನಿರ್ದೇಶನ ಕೊಡುವವರು ಯಾರು? ಎಂದು ಪ್ರಶ್ನಿಸಿದರು.
ಸರ್ಕಾರ ನಡೆಸಲು ಸಿದ್ದರಾಮಯ್ಯಗೆ ಶಕ್ತಿ ಇದ್ಯಾ? ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ತೆರವುಗೊಳಿಸಿದ್ದು ಒಳ್ಳೆಯ ಕೆಲಸ. ಘನತ್ಯಾಜ ಕಾನೂನು ಬದ್ಧವಾಗಿ ತೆರವುಗೊಳಿಸುವ ಕೆಲಸ ಸರ್ಕಾರ ಮಾಡಿದೆ. ಆದರೆ ಕೇರಳದ ಸಿಎಂ ಪಿಣರಾಯ್ ವಿಜಯನ್ ಪ್ರಶ್ನೆ ಮಾಡುತ್ತಾರೆ. ಕೇರಳ ಚುನಾವಣಾ ಕಾವು ಕರ್ನಾಟಕದಲ್ಲಿ ಹೇಗೆ ಕೆಲಸ ಮಾಡುತ್ತದೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರನ್ನು ಹೊರಹಾಕಬೇಕೋ ಬೇಡವೋ ಎಂಬುದನ್ನು ಕೇರಳ ನಿರ್ಧಾರ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೋಗಿಲು ನಲ್ಲಿ ಅಕ್ರಮ ವಲಸಿಗರು ಇದ್ದಾರೆ. ಹೀಗಿರುವಾಗ ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಸಿಎಂ ಹಾಗೂ ಡಿಸಿಎಂ ಒಟ್ಟಿಗೆ ಸಭೆ ಮಾಡುತ್ತಾರೆ. ಕುರ್ಚಿ ಉಳಿಸಲು ಹಾಗೂ ಕುರ್ಚಿ ಪಡೆಯಲು ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದ್ದು, ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡುತ್ತೇವೆ ಎಂದು ಭರವಸೆ ಕೊಡುತ್ತಾರೆ. ಬೆಂಗಳೂರಿನ ವಾಸಿಗರು ಹತ್ತಾರು ವರ್ಷದಿಂದ ಮನೆಗಾಗಿ ಅರ್ಜಿ ಹಾಕ್ತಿದ್ದಾರೆ. ಆದರೆ ಯಾರಿಗೂ ಮನೆ ಸಿಕ್ಕಿಲ್ಲ. ಆದರೆ ಅಕ್ರಮ ವಲಸಿಗರಿಗೆ ಮನೆ ನೀಡಲಾಗುತ್ತಿದೆ ಎಂದು ಈ ವೇಳೆ ಕಿಡಿಕಾರಿದ್ದಾರೆ.



