ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಮಾನವ ಕುವೆಂಪು ರವರ ಜನ್ಮದಿನ ಹಾಗೂ ಕುವೆಂಪು ಗೀತ ಗಾಯನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಗಡಿನಾಡು ಜನಪದ ಗಾಯಕ ಜಿ. ಸುರೇಶ್ ನಾಗ್ ಹರದನಹಳ್ಳಿ ಅವರು ಕುವೆಂಪು ರವರ ಗೀತೆಯನ್ನು ಹಾಡುವ ಮೂಲಕ ಉದ್ಘಾಟಿಸಿದರು.
ಮುಂದುವರೆದು, ಕುವೆಂಪು ಮಾನವೀಯತೆಯ ಸಾರವನ್ನು ಜಗತ್ತಿಗೆ ಕನ್ನಡ ಸಾಹಿತ್ಯ ರಚನೆಯ ಮೂಲಕ ಹರಡಿ. ಕನ್ನಡಿಗರಿಗೆ ಗೌರವ ತಂದರು ಎಂದು ತಿಳಿಸಿದರು.
ಬಳಿಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ. ಮಾತನಾಡಿದ ಎಸ್ ಲಕ್ಷ್ಮೀನರಸಿಂಹ, ವಿಶ್ವಕವಿ ಕುವೆಂಪು ಅವರ ಭಾವಗೀತೆಗಳು, ನಾಟಕಗಳು, ಕೃತಿಗಳು, ಸಾಮಾಜಿಕ, ಪರಿಸರ ಹಾಗೂ ಗಂಭೀರ ವಿಚಾರಗಳ ಸಂಪೂರ್ಣ ಚಿಂತನೆಯ ಸಾಹಿತ್ಯವಾಗಿದೆ. ಇಂಗ್ಲಿಷ್ ಸಾಹಿತ್ಯ ರಚನೆಯ ಒಲವು ಹೊಂದಿದ್ದ ಕುವೆಂಪು ರವರನ್ನು ಗುರುಗಳ ಮಾತಿನಂತೆ ಕನ್ನಡದಲ್ಲಿ ಬರೆಯಲು ಆರಂಭಿಸಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟವರು ಎಂದು ಹೇಳಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಕುವೆಂಪು ಸಾಹಿತ್ಯದ ಮೇಲೆ ಶಿಖರ. ಕುವೆಂಪುರವರು ರಾಮಕೃಷ್ಣ ಪರಮಹಂಸರ ಚಿಂತನೆ, ರಾಮಕೃಷ್ಣ ಆಶ್ರಮದ ಪ್ರಭಾವಕೆ ಒಳಗಾಗಿ ಆಧ್ಯಾತ್ಮಿಕ ಹಾಗೂ ಪರಿಸರ, ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ಸಾಹಿತ್ಯದ ಮೂಲಕ ನೀಡಿ ಮಾನವ ಕಲ್ಯಾಣವನ್ನು ಉಂಟು ಮಾಡಿದವರು.
ಇಂದಿಗೂ ಕುವೆಂಪುರವರ ಲಕ್ಷಾಂತರ ಓದುಗರು ಇರುವುದನ್ನು ಕಾಣಬಹುದು. ಕುವೆಂಪು ಅವರಿಗೆ ಆಧ್ಯಾತ್ಮ ಪುರುಷರ ಪ್ರಭಾವವಿದ್ದು, ರಾಷ್ಟ್ರೀಯ ಚಿಂತನೆಗಳನ್ನು ಹಾಗೂ ನಾಡಿನ ಭಾವಗಳನ್ನು ಶಕ್ತಿಯುತವಾಗಿ ಸಾಹಿತ್ಯದ ಮೂಲಕ ರಚಿಸಿ ಪ್ರೇರಣೆ ನೀಡಿದವರು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಗೀತೆ ಸುಭಾಷ್ ಚಂದ್ರ ಬೋಸ್ ರವರ ಭಾರತೀಯ ರಾಷ್ಟ್ರೀಯ ಸೈನ್ಯದಲ್ಲಿ ಸೈನಿಕರಿಗೆ ಸ್ಪೂರ್ತಿಯಾಗಿತ್ತು ಎಂದು ನೇತಾಜಿ ಒಡನಾಡಿ ಐಎನ್ಎ ರಾಮರಾವ್ ಸದಾ ಸ್ಮರಿಸುತ್ತಿದ್ದರು ಎಂದು ತಿಳಿಸಿದರು.
ಬಳಿಕ ಶಿಕ್ಷಕ ಯಳಂದೂರು ರಂಗನಾಥ್ ಕುವೆಂಪುರವರ ಕವಿತೆಗಳ ವಾಚನ ನಡೆಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಹಾಸಭಾ ಅಧ್ಯಕ್ಷ ಶ್ರೀ ಶ್ರೀನಿವಾಸಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗಮೂರ್ತಿ, ರವಿ ಚಂದ್ರ ಪ್ರಸಾದ್, ಪದ್ಮ ಪುರುಷೋತ್ತಮ್, ಜಗದೀಶ್, ಪದ್ಮಾಕ್ಷಿ ಉಪ್ಪರ ಸಂಘದ ಅಧ್ಯಕ್ಷ ಜಯಕುಮಾರ್ ಇದ್ದರು. ಗಾಯಕರಾದ ಯಳಂದೂರು ಸುರೇಶ್, ಜನಪದ ಗಾಯಕ ಜ ಸುರೇಶ್ ನಾಗ್ ಹರದನಹಳ್ಳಿ ರವರ ಕುವೆಂಪು ಗಾಯನ ಎಲ್ಲರ ಮನಸೂರೆಗೊಂಡಿತು.



