ಬೆಂಗಳೂರು: ಕೋಗಿಲು ಲೇಔಟ್ ಅಕ್ರಮ ಮನೆ ತೆರವು ಹಾಗೂ ಸಂತ್ರಸ್ತರಿಗೆ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಪುನರ್ವಸತಿ ಕಲ್ಪಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸತ್ಯಶೋಧನಾ ಸಮಿತಿ ತನ್ನ ವರದಿಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿದ್ದು, ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.
ಈ ಸಮಿತಿಯ ವರದಿಯನ್ನು ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದ್ದು, ವರದಿಯಲ್ಲಿ ಕೋಗಿಲು ಪ್ರದೇಶದ ಫಕೀರ್ ಕಾಲೋನಿ, ವಾಸಿಂ ಕಾಲೋನಿ ಹಾಗೂ ಫಕೀರ್ ನ್ಯೂ ಕಾಲೋನಿಗಳಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಭೂಮಿ ಮತ್ತು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಾದ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುವವರು ನೆಲೆಸಿದ್ದಾರೆ. ಒಟ್ಟು 167 ಕುಟುಂಬಗಳಲ್ಲಿ 136 ಮುಸ್ಲಿಂ ಕುಟುಂಬಗಳು, 31 ಹಿಂದೂ ಕುಟುಂಬಗಳು ಹಾಗೂ ಒಂದು ಕ್ರೈಸ್ತ ಕುಟುಂಬವಿದೆ.
ಈ ನಿವಾಸಿಗಳು ಸಲ್ಲಿಸಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳಲ್ಲಿ ವಿಳಾಸಗಳು ಭಿನ್ನವಾಗಿದ್ದು, ಅವರು ಭಾರತೀಯರೇ ಅಥವಾ ಬಾಂಗ್ಲಾದೇಶಿಗಳೇ ಅಥವಾ ರೋಹಿಂಗ್ಯಾಗಳೇ ಎಂಬುದನ್ನು ಪತ್ತೆಹಚ್ಚುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದ್ದು, ಭಾರತೀಯರ ಸಂವಿಧಾನಾತ್ಮಕ ಹಕ್ಕುಗಳನ್ನು ಹೊರಗಿನವರು ಕಸಿದುಕೊಳ್ಳುತ್ತಿರುವುದು ಗಂಭೀರ ಚಿಂತೆಯ ವಿಷಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮ ವಲಸಿಗರಿಗೆ ರಾಜ್ಯ ಸರ್ಕಾರ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ನೀಡುತ್ತಿದ್ದು, ಈವರಿಗೆ ಪುನರ್ವಸತಿ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದು ಇತರರಿಗೆ ಮಾಡುವ ಅನ್ಯಾಯವಾಗಿದೆ. ವಾಸಿಂ ಎಂಬ ವ್ಯಕ್ತಿ ಪ್ರತಿ ಕುಟುಂಬದಿಂದ ರೂ.3 ಲಕ್ಷದಿಂದ ರೂ.5 ಲಕ್ಷ ವರೆಗೆ ಹಣ ಸಂಗ್ರಹಿಸಿ ಅವರಿಗೆ ವಾಸಕ್ಕೆ ಅವಕಾಶ ಕಲ್ಪಿಸಿದ್ದಾನೆ. ಆತ ಸ್ಥಳೀಯ ಕಾಂಗ್ರೆಸ್ ನಾಯಕನಾಗಿದ್ದು, ಸಚಿವ ಕೃಷ್ಣ ಬೈರೇಗೌಡ ಅವರ ಆಪ್ತನಾಗಿದ್ದಾನೆ. ಆದರೆ, ಸರ್ಕಾರಿ ಭೂಮಿ ದುರುಪಯೋಗವಾಗುತ್ತಿದ್ದರೂ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ.
ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿಅಕ್ರಮ ನಿವಾಸಿಗಳಿಗೆ ಮನೆ ನಿರ್ಮಿಸಲು ಯಾವುದೇ ನಿಯಮಾವಳಿ ಇಲ್ಲ. ಅಕ್ರಮ ನಿವಾಸಿಗಳಿಗೆ ಪುನರ್ವಸತಿ ನೀಡಿದರೆ, ಮುಂದಿನ ದಿನಗಳಲ್ಲಿ ಹಲವರು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿ ಮನೆಗಳ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ವರದಿ ಸಲ್ಲಿಸಿದ ಬಳಿ ಮಾತನಾಡಿದ ಎಸ್.ಆರ್.ವಿಶ್ವನಾಥ್ ಅವರು, ಅಕ್ರಮ ನಿವಾಸಿಗಳನ್ನು ತೆರವುಗೊಳಿಸಿದಾಗ ಎಐಸಿಸಿ ಸಂಘಟನೆ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಕೇರಳ ಮುಖ್ಯಮಂತ್ರಿ ಅವರು ಈ ಜನರು ಕೇರಳದವರಾಗಿದ್ದಾರೆ ಎಂದು ಹೇಳಿದ್ದರು. ಆದರೆ ವಾಸ್ತವಾಂಶವೇನೆಂದರೆ ಅವರಲ್ಲಿ ಯಾರೂ ಕೇರಳದವರಲ್ಲ. ಬೆಂಗಳೂರಿನಲ್ಲಿ 100 ಮಂದಿ ಕಸ ಸಂಗ್ರಹಿಸುವವರಲ್ಲಿ 95 ಜನ ರೋಹಿಂಗ್ಯಾಗಳೇ ಆಗಿದ್ದಾರೆ. ಇವರಿಗೆ ಎಲ್ಲಾ ದಾಖಲೆಗಳನ್ನು ಒದಗಿಸುವ ಏಜೆನ್ಸಿಯೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.



