ಶಿಡ್ಲಘಟ್ಟ: ಸೂರಿಲ್ಲದ ಕಡು ಬಡವರಿಗೆ ಮನೆ ಒದಗಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಮಾನವ ಹಕ್ಕುಗಳ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಿಡ್ಲಘಟ್ಟ ತಾಲೂಕಿನ ಚೀಮನಹಳ್ಳಿ ನಿವಾಸಿ ಸಿ.ಎಂ. ಬೈರೇಗೌಡರು ಹೇಳಿದರು.
ಈ ಕುರಿತು ತಾಲೂಕಿನ ಚೀಮನಹಳ್ಳಿ ಸಿ.ಎಂ.ಬೈರೇಗೌಡರ ತೋಟದಲ್ಲಿ ನಡೆದ ಮಾನವ ಹಕ್ಕುಗಳ ಕಮಿಟಿ ವತಿಯಿಂದ ಬಡವರಿಗೆ ಮನೆ ನಿರ್ಮಾಣಕ್ಕಾಗಿ ಸಿಮೆಂಟ್ ಬ್ರಿಕ್ಸ್ ಮಿಷನರಿಗಳು ಪೂಜಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಇದುವರೆಗೆ ಯಾವುದೇ ಸಮಾಜ ಸೇವಕರು ಕೈ ಹಾಕದ ಮಹತ್ವದ ಕಾರ್ಯಕ್ಕೆ ಮಾನವ ಹಕ್ಕುಗಳ ಕಮಿಟಿ ಮುಂದಾಗಿದ್ದು, ಜಿಲ್ಲಾದ್ಯಂತ ಹತ್ತು ಸಾವಿರ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಮನೆ ನಿರ್ಮಾಣಕ್ಕೆ ಅಗತ್ಯವಿರುವ ಇಟ್ಟಿಗೆ, ಸಿಮೆಂಟ್, ಎಂ–ಸ್ಯಾಂಡ್, ಕಬ್ಬಿಣದ ಆಂಗಲ್, ಶೀಟ್, ಬಾಗಿಲು ಹಾಗೂ ಒಂದು ಕಿಟಕಿಯನ್ನು ಹಂತ ಹಂತವಾಗಿ ಉಚಿತವಾಗಿ ಒದಗಿಸಲಾಗುವುದು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮಗಳಲ್ಲಿ ಮಾನವ ಹಕ್ಕುಗಳ ಕಮಿಟಿ ಸದಸ್ಯರು ಹಾಗೂ ಕಾರ್ಮಿಕ ಸಂಘಟನೆಗಳ ಸಹಕಾರದಿಂದ ಸೂರಿಲ್ಲದ ಕಡು ಬಡವರ ಸಮೀಕ್ಷೆ ನಡೆಸಲಾಗುವುದು. ಫೆಬ್ರವರಿ ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಮನೆ ನಿರ್ಮಾಣ ಪೂರ್ಣಗೊಂಡ ಬಳಿಕ ಗೃಹಪ್ರವೇಶ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡರು ಮಾತನಾಡಿ, ಇಂತಹ ಕಾಲಘಟ್ಟದಲ್ಲಿ ಸೂರಿಲ್ಲದ ನಿರ್ಗತಿಕರಿಗಾಗಿ ದೊಡ್ಡ ಯೋಜನೆ ರೂಪಿಸಿರುವುದು ಶ್ಲಾಘನೀಯ. ಈ ಕಾರ್ಯಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಬಳಿಕ ರೈತ ರವಿ ಪ್ರಕಾಶ್ ಮಾತನಾಡಿ ಸಿಎಂ ಬೈರೇಗೌಡ ಅವರು,ಸಮಾಜಕ್ಕೆ ಕೊಡುಗೆ ನೀಡುವವರೇ ನಿಜವಾದ ಸಮಾಜಸೇವಕರು. ಈ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಟರಾಜ್, ಅನಿಲ್ ಕುಮಾರ್, ಚಿಂತಾಮಣಿ ದೇವರಾಜು, ಭಗತ್ ಸುರೇಶ್, ಮುನಿರಾಜು, ವೆಂಕಟೇಶ್, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.



