ಮೈಸೂರು: “ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. ಸುಮ್ಮನೆ ರಾಜಕೀಯವಾಗಿ ಭಾಷಣ ಮಾಡಿದ್ದಾರೆ ಅಷ್ಟೇ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಹಾಗೊಂದು ವೇಳೆ ಮೈತ್ರಿಯಾಗಿ ಬಂದರೂ ಬಿಜೆಪಿ ಅವರು ಜೆಡಿಎಸ್ಗೆ ಯಾಕೆ ಅಧಿಕಾರ ಬಿಟ್ಟುಕೊಡುತ್ತಾರೆ. ಜೆಡಿಎಸ್, ಬಿಜೆಪಿ ಇಬ್ಬರಿಗೂ ಬಹುಮತ ಬರೋದಿಲ್ಲ. ಒಂದು ವೇಳೆ ಬಂದರೂ ಜೆಡಿಎಸ್ಗೆ ಅಧಿಕಾರ ಕೊಡೋದಿಲ್ಲ. 2028ಕ್ಕೂ ನಮ್ಮದೇ ಅಧಿಕಾರ. ನಾಯಕತ್ವ ಯಾರದ್ದು ಎಂಬುದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ” ಎಂದರು.
ಎಚ್.ಡಿ.ರೇವಣ್ಣರನ್ನು ಬಂಧಿಸಿದ ವಿಚಾರವಾಗಿ ಮಾತನಾಡಿ ಪ್ರತಿಕ್ರಿಯಿಸಿದ ಸಿಎಂ, “ನಾವು ಯಾವತ್ತೂ ಯಾರ ಪ್ರಕರಣದಲ್ಲಿಯೂ ತಲೆ ಹಾಕುವುದಿಲ್ಲ. ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ನಮ್ಮದು ಏನೂ ಇಲ್ಲ. ಸುಮ್ಮನೆ ಇವರು ಏನೇನೋ ಸುಳ್ಳು ಹೇಳುತ್ತಾರೆ ಅಷ್ಟೇ. ನಾನೇಕೆ ರೇವಣ್ಣ ಅವರನ್ನು ದ್ವೇಷ ಮಾಡಲಿ. ಅವರು ಅಧಿಕಾರಕ್ಕೆ ಬರಲ್ಲ. ಒಂದು ವೇಳೆ ಬಂದರೆ ಕಾನೂನು ರೀತಿ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ” ಎಂದು ಹೇಳಿದರು.
ರಾಜ್ಯಪಾಲರ ವಿಚಾರವಾಗಿ ಮಾತನಾಡಿದ ಸಿಎಂ, “ರಾಜ್ಯಪಾಲರು ರಾಷ್ಟ್ರಪತಿಗಳಿಗೆ ನಡೆದ ಘಟನೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ, ಕೊಡಲಿ ಬಿಡಿ. ಅವತ್ತು ಏನೇನು ನಡೆಯಿತು ಎಂಬುದನ್ನು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ವಿವರಿಸಬಹುದು. ನಾವೇನೂ ವಿವರಣೆ ಕೊಡುವುದಿಲ್ಲ. ನಾಳೆ ಗಣರಾಜ್ಯೋತ್ಸವದಲ್ಲೂ ರಾಜ್ಯಪಾಲರು ಭಾಷಣ ಮಾಡಬೇಕಿದೆ. ನಾವು ಬರೆದು ಕೊಟ್ಟ ಭಾಷಣವನ್ನು ರಾಜ್ಯಪಾಲರು ಗಣರಾಜ್ಯೋತ್ಸವದ ಭಾಷಣದಲ್ಲಿ ಓದಬೇಕು ಎಂಬ ನಿಯಮ ಇಲ್ಲ. ಅದರಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು. ರಾಜ್ಯಪಾಲರು ನಾಳೆ ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ಜಂಟಿ ಸದನದ ಅಧಿವೇಶನದಲ್ಲಿ ಮಾತ್ರ ಸರ್ಕಾರ ಬರೆದುಕೊಟ್ಟಿದ್ದನ್ನೇ ಓದಬೇಕು ಅನ್ನೋ ನಿಯಮ ಇದೆ” ಎಂದು ಇದೇ ವೇಳೆ ತಿಳಿಸಿದರು.
“ಫೆ. 2 ರಿಂದ ಬಜೆಟ್ ತಯಾರಿ ಅಧಿಕೃತ ಸಭೆ ಆರಂಭ ಮಾಡುತ್ತೇನೆ. ಈಗಾಗಲೇ ತಯಾರಿ ಪ್ರಕ್ರಿಯೆ ನಡೆದಿದೆ. ಅಧಿಕೃತ ಸಭೆಗಳನ್ನು ಫೆ.2 ರಿಂದ ಶುರು ಮಾಡುತ್ತೇನೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಕ್ತ ವಾತಾವರಣ ಇದೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಆಗುತ್ತಿದೆ. ಡಾಲರ್ಸ್ನ ಸಮಾವೇಶದಲ್ಲೂ ಕೂಡ ಈ ವಿಚಾರದಲ್ಲಿ ಮಹತ್ವದ ಚರ್ಚೆಯಾಗಿವೆ” ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶ: ದಾವೋಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವರು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ. ಕೌಶಲ್ಯವಿರುವ ಮಾನವ ಸಂಪನ್ಮೂಲ ಲಭ್ಯತೆಯಿದೆ. ಇದಕ್ಕೆ ತರಬೇತಿಯೂ ನೀಡಲಾಗುತ್ತಿದೆ, ತರಬೇತಿ ಪಡೆವರಿಗೆ ಖಚಿತವಾಗಿ ಕೆಲಸ ದೊರೆಯುತ್ತದೆ ಎಂದರು.
ಗಣರಾಜ್ಯೋತ್ಸವದ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಪತ್ರ ವ್ಯವಹಾರವೆಲ್ಲಾ ಆಗಿದ್ದರೂ, ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ನಮ್ಮಿಂದ ಕಳುಹಿಸಿದ್ದರೂ ಅವರು ಸುಮ್ಮನೆ ಆರೋಪಿಸುತ್ತಿದ್ದಾರೆಂದರು. ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಅಮರನಾಥ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇತರರು ಇದ್ದರು.



