ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ನೀರಿನ ಹಾಹಾಕಾರ ಎದುರಾಗುವ ಆತಂಕ ಶುರುವಾಗಿದ್ದು, ಕೆಐಎಡಿಬಿ ಅಧಿಕಾರಿಗಳು ಪಂಪ್ ಹೌಸ್ನ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಸಂಪರ್ಕ ಕಡಿತಗೊಳಿಸಲಾಗಿದೆ. ಹಾಗಾಗಿ ದೇವರಾಯಪಟ್ಟಣ ಕೆರೆಯಲ್ಲಿ ನೀರು ನಿಧಾನವಾಗಿ ಬರಿದಾಗುತ್ತ ಹೋಗುತ್ತಿದ್ದು, 10 ಸಾವಿರ ಮಠದ ಮಕ್ಕಳಿಗೆ, ಲಕ್ಷಾಂತರ ಭಕ್ತಾದಿಗಳಿಗೆ ಇದರ ಬಿಸಿ ತಟ್ಟಲಿದೆ.
ಕಳೆದ ವರ್ಷ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಿದ್ದಗಂಗಾ ಮಠಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅದರ ಪರಿಣಾಮ ಈ ವರ್ಷ ಮಠಕ್ಕೆ ನೀರಿನ ಅಭಾವ ಎದುರಾಗಿದೆ. ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ, ದೇವರಾಯಪಟ್ಟಣ ಕೆರೆಯಿಂದ ಮಠಕ್ಕೆ ನೀರು ಪಂಪ್ ಮಾಡಲಾಗುತ್ತದೆ. ಆದರೆ ಕಳೆದ ವರ್ಷ ಕೆಐಎಡಿಬಿ ಅಧಿಕಾರಿಗಳು ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಪಂಪ್ ಮಾಡಿದ 70 ಲಕ್ಷ ವಿದ್ಯುತ್ ಬಿಲ್ ಪಾವತಿಸುವಂತೆ ಮಠಕ್ಕೆ ನೋಟಿಸ್ ಕೊಟ್ಟಿದೆ.
ಆದರೆ ಅಸಲಿಗೆ ಮಠ ಒಂದು ಹನಿ ನೀರನ್ನೂ ಉಪಯೋಗಿಸಿರಲಿಲ್ಲ. ಬಳಿಕ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಠವು ಒಂದು ನಯಾಪೈಸೆಯೂ ಕಟ್ಟಬೇಕಿಲ್ಲ, ಎಲ್ಲ ಹಣವನ್ನೂ ನಾವೇ ಭರಿಸುತ್ತೇವೆ ಎಂದಿದ್ದರು. ಸಚಿವರು ಭರವಸೆ ಕೊಟ್ಟು ಒಂದು ವರ್ಷ ಆದರೂ ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಬಿಲ್ ಪಾವತಿಸದ ಪರಿಣಾಮ ಬೆಸ್ಕಾಂ ಅಧಿಕಾರಿಗಳು ಹೊನ್ನೆನಹಳ್ಳಿಯಲ್ಲಿ ನೀರು ಪಂಪ್ ಮಾಡುವ ಘಟಕದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಹಾಗಾಗಿ ಕಳೆದ 6-8 ತಿಂಗಳಿಂದ ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಪಂಪ್ ಆಗುತ್ತಿಲ್ಲ. ಇದರಿಂದ ದೇವರಾಯಪಟ್ಟಣ ಕೆರೆಯಲ್ಲಿ ನೀರು ಬರಿದಾಗುತ್ತಿದೆ. ಇದಕ್ಕೆ ಉತ್ತರ ಕೊಡಬೇಕಾದ ಕೆಐಎಡಿಬಿ ಅಧಿಕಾರಿಗಳು ಪ್ರತಿಕ್ರಿಯೆ ಕೊಡದೇ ನುಣುಚಿಕೊಳ್ಳುತ್ತಾರೆ. ಕೆಐಎಡಿಬಿ ಮುಖ್ಯ ಎಂಜಿನಿಯರ್ ಅನಿಲಕುಮಾರ್ ರಾಥೋಡ್ ಮಾಹಿತಿ ಬೇಕಾದರೆ ಮೂರ್ನಾಲ್ಕು ದಿನ ಬಿಟ್ಟು ಬನ್ನಿ ಎಂದು ಅಸಡ್ಡೆ ತೋರಿದ್ದಾರೆ.
ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಯದ ಪರಿಣಾಮ ದೇವರಾಯಪಟ್ಟಣ ಕೆರೆ ಬರಿದಾಗುವ ಲಕ್ಷಣ ಗೋಚರಿಸಿದ್ದು, ಫೆ.6ರಿಂದ 20ರವರೆಗೆ 15 ದಿನಗಳ ಕಾಲ ಮಠದ ಜಾತ್ರೆ ನಡೆಯಲಿದೆ. ಪ್ರತಿದಿನ ಲಕ್ಷಾಂತರ ಭಕ್ತಾಧಿಗಳಿಗೆ ಊಟ ಸ್ನಾನಾದಿಗಳಿಗೆ ನೀರಿನ ಕೊರತೆ ಉಂಟಾಗಬಹುದು. ಅಲ್ಲದೆ ನಿತ್ಯ 10 ಸಾವಿರ ವಿದ್ಯಾರ್ಥಿಗಳ ಉಪಯೋಗಕ್ಕೆ ನೀರು ಬೇಕಾಗಿದೆ. ಮಾರ್ಚ್ ಮಧ್ಯ ಭಾಗದಲ್ಲಂತೂ ದೇವರಾಯಪಟ್ಟಣ ಕೆರೆಯ ನೀರು ಸಂಪೂರ್ಣ ಖಾಲಿಯಾಗಲಿದೆ. ಆಗ ಅಕ್ಷರಶಃ ಮಠಕ್ಕೆ ನೀರಿನ ಅಭಾವ ತಲೆದೋರಲಿದೆ ಎನ್ನಲಾಗಿದೆ.
ಕೆಐಎಡಿಬಿ ಅಧಿಕಾರಿಗಳು ಬೆಸ್ಕಾಂ ಬಿಲ್ ಪಾವತಿಸಿ ವಿದ್ಯುತ್ ಸಂಪರ್ಕ ಕೊಡಿಸಿದರೆ ಮಾತ್ರ ಹೊನ್ನೆನಹಳ್ಳಿಯಿಂದ ನೀರು ಹರಿಯಲಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮಠದವರೇ ವಿದ್ಯುತ್ ಬಿಲ್ ಭರಿಸಿ ಅಂತಾ ಅಧಿಕಾರಿಗಳು ಕಳೆದ ವರ್ಷ ಲೆಟರ್ ಕಳಿಸಿದ್ದು, ಸರ್ಕಾರಕ್ಕೆ ಮುಜುಗರ ತಂದಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಸಚಿವ ಎಂ.ಬಿ ಪಾಟೀಲ್ ಸಂಪೂರ್ಣ ಬಿಲ್ ಸರ್ಕಾರ ಭರಿಸಲಿದೆ ಎಂದಿದ್ದರು. ಆದರೆ ಒಂದು ವರ್ಷ ಆದರೂ ವಿದ್ಯುತ್ ಬಿಲ್ ಪಾವತಿ ಆಗಿಲ್ಲ. ಇದರಿಂದ ಮಠಕ್ಕೆ ನೀರಿನ ಕೊರತೆ ತಲೆದೋರಿದೆ.



