ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ಹಾಗೂ ಬೆಂಗಳೂರು ನಗರ ಸಾರಿಗೆ ಬಸ್ಗಳ ಮೇಲೆ ತಂಬಾಕು ಜಾಹೀರಾತು ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು. ಅಲ್ಲದೆ ಬಸ್ಗಳ ಮೇಲಿನ ಜಾಹೀರಾತು ಪೋಸ್ಟರ್ಗಳನ್ನು ಕಿತ್ತೆಸೆದು ಜನ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಇದೀಗ ಜನಾಕ್ರೋಶಕ್ಕೆ ಕೆಎಸ್ಆರ್ಟಿಸಿ ಮಣಿದಿದೆ.
ಇನ್ನೂ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತಿನ ಪೋಸ್ಟರ್ ಅಂಟಿಸೋದರ ವಿರುದ್ಧ ಒಂದು ಆಂದೋಲನವೇ ಶುರುವಾಗಿತ್ತು. ಸಾರ್ವಜನಿಕರು, ಸಂಘಟನೆಗಳು ಬಸ್ಗಳಿಗೆ ಅಂಟಿಸಲಾಗಿದ್ದ ಜಾಹೀರಾತು ಪೋಸ್ಟರ್ ಕಿತ್ತೆಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ರೀತಿಯ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹ ಕೂಡ ಮಾಡಿದ್ದರು. ಸದ್ಯ ಜನಾಕ್ರೋಶಕ್ಕೆ ಮಣಿದಿರುವ ಸರ್ಕಾರ, ಕೂಡಲೇ ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಜಾಹಿರಾತುಗಳ ತೆರವಿಗೆ ಕೆಎಸ್ಆರ್ಟಿಸಿ ಎಂಡಿಗೆ ಸೂಚನೆ ನೀಡಿದ್ದು, ರಾಜ್ಯದ 2 ಸಾವಿರ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅನ್ನು ಅಳವಡಿಕೆ ಮಾಡಿದ್ದಾರೆ. 15 ದಿನಗಳ ಒಳಗೆ ಎಲ್ಲಾ ಬಸ್ಗಳ ಮೇಲಿನ ಜಾಹೀರಾತು ತೆರವಿಗೆ ಸೂಚನೆ ನೀಡಲಾಗಿದೆ.
ಇನ್ನೂ ಜಾಹೀರಾತು ನೀಡಿದ ಕಂಪನಿಗಳ ಜೊತೆಯೂ ಈ ಬಗ್ಗೆ ಮಾತನಾಡಿದ್ದು, ಜಾಹೀರಾತುಗಳ ತೆರವು ಮಾಡುವುದಕ್ಕೆ ಕಂಪನಿಗಳು ಒಪ್ಪಿಕೊಂಡಿವೆ. ಆಯಾ ಡಿಪೋಗಳಲ್ಲಿ ಡಿಪೋ ಮ್ಯಾನೆಜರ್ಗಳ ಜೊತೆ ಮಾತನಾಡಿದ್ದು, ತಕ್ಷಣಕ್ಕೆ ತೆರವು ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.
ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲಿ ಪೋಸ್ಟರ್ಗಳನ್ನ ಕಿತ್ತೆಸೆಯುವ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಲ್ಲಾ ತಂಬಾಕು ಉತ್ಪನ್ನಗಳ ಜಾಹೀರಾತುಗಳ ತೆರವಿಗೆ ಸೂಚಿಸಿದ್ದು, ಸಚಿವರ ನಿರ್ದೇಶನದ ಮೇರೆಗೆ ವಾರ್ಷಿಕವಾಗಿ 60 ಕೋಟಿ ಆದಾಯ ಬರುತ್ತಿದ್ದರೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.



