ಕೆ.ಆರ್.ನಗರ : ಸೂರ್ಯ ವಂಶದವರಾದ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಜನಿಸಿದವರೆಂದು ಇತಿಹಾಸದಲ್ಲಿ ದಾಖಲಾಗಿದ್ದು ಅವರ ಸಾಧನೆ ಅಪಾರ ಎಂದು ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಸವಿತಾಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಯತ್ರಿ ಮಂತ್ರವನ್ನು ರಚಿಸಿದ ದೈವಿ ಪುರುಷರಾಗಿರುವ ಅವರು ಅಜರಾಮರ ಎಂದರು.
ಮಹಾ ಪುರುಷನ ವಂಶಸ್ತರು ಅವರಿಗೆ ಗೌರವ ಬರುವಂತೆ ನಡೆದುಕೊಂಡು ತಮ್ಮ ಮೂಲ ವೃತ್ತಿಯೊಂದಿಗೆ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು.
ಸವಿತಾ ಸಮಾಜದ ಪ್ರತಿಯೊಬ್ಬರೂ ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಂದ ನಡೆದುಕೊಂಡು ಸಂಘಟಿತರಾಗಿ ಎಂದು ಸಲಹೆ ನೀಡಿದ ತಹಶೀಲ್ದಾರರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿತವಚನ ನುಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರು ಸರ್ಕಾರ ಎಷ್ಟೆ ಕಾಯಿದೆಗಳನ್ನು ಜಾರಿಗೆ ತಂದು ಕಾನೂನು ಮಾಡಿದರು ನಮ್ಮ ಸಮಾಜವನ್ನು ನಿಂದನೆ ಮಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಜಾತಿನಿಂದನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಿದರು.

ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಆನಂತರ ತಾಲೂಕು ಕೇಶಾಲಂಕಾರಿಗಳ ಸಂಘದ ವತಿಯಿಂದ ತಹಶೀಲ್ದಾರರಿಗೆ ಸವಿತಾ ಮಹರ್ಷಿಯವರ ಭಾವ ಚಿತ್ರವನ್ನು ಕೊಡುಗೆಯಾಗಿ ನೀಡಿ ತಾಲೂಕು ಕಚೇರಿಯಲ್ಲಿ ಅಳವಡಿಸುವಂತೆ ಕೋರಲಾಯಿತು.



