ಕೆ.ಆರ್.ನಗರ : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಬ್ಯಾಂಕಿನ ವತಿಯಿಂದ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ರೈತ ಸದಸ್ಯರುಗಳಿಗೆ ಸಾಲ ನೀಡಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಮುಸ್ಲಿಂ ಬಡಾವಣೆಯ ಜಾಮೀಯಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಕಲಂ ಆಜಾದ್ ಸೇವಾ ಟ್ರಸ್ಟ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ರೈತಪರ ಕೆಲಸಗಳನ್ನು ಹಮ್ಮಿಕೊಂಡಿದ್ದು ಇದರೊಂದಿಗೆ ಮಾರ್ಚ್ 31ರ ಒಳಗೆ ಸಾಲ ವಸೂಲಾತಿಯಲ್ಲಿ ಶೇಕಡ 100 ರಷ್ಟು ಗುರಿ ಹೊಂದಲಾಗಿದೆ ಎಂದರು.
ಪ್ರತಿಯೊಬ್ಬ ರೈತರು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ಮೂರು ವರ್ಷಗಳಿಂದ ಹೊಸ ಸದಸ್ಯರಿಗೆ ಬಡ್ಡಿ ರಹಿತ ಸಾಲ ಸ್ಥಗಿತವಾಗಿತ್ತು, ಆದರೆ ನಮ್ಮ ಆಡಳಿತ ಮಂಡಳಿ ಮುಖ್ಯ ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದಾಗ ಇದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದ್ದು ಇದಕ್ಕೆ ರೈತರ ಪರವಾಗಿ ನಾನು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಟ್ರಸ್ಟ್ ಅಧ್ಯಕ್ಷ ಸೈಯದ್ ಜಾಬೀರ್, ಉಪಾಧ್ಯಕ್ಷ ವಸೀಂ ಉಲ್ಲಾಖಾನ್, ಕಾರ್ಯದರ್ಶಿ ಸಮೀರ್ ಅಹಮದ್, ಸದಸ್ಯರಾದ ಶಾಕೀರ್, ರಿಯಾನ್, ಖಾದರ್, ತೌಕೀರ್, ಜಾಮೀಯಾ ಮಸಿದಿ ಕಮಿಟಿ ಅಧ್ಯಕ್ಷ ಅಬ್ಸರ್ ಬಾಬು, ಕಾರ್ಯದರ್ಶಿ ತಸಾವರ್ ಪಾಷ, ಸದಸ್ಯರಾದ ಮುಜಾಯಿದ್, ರಫೀಕ್, ಮಜರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ದೊಡ್ಡಸ್ವಾಮೇಗೌಡರ ಅಭಿಮಾನಿಗಳು ಹಾಜರಿದ್ದರು



