ಶಿವಮೊಗ್ಗ : ರಾಜ್ಯದಲ್ಲಿ ಹಿಂಸಾತ್ಮಕ ಹಾಗೂ ಮಾನವೀಯತೆ ವಿರೋಧಿ ಕ್ರೌರ್ಯಕರ ಘಟನೆಗಳು ಮುಂದುವರಿದಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಿಜಾಪುರ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಶನಿವಾರ ಭೀಕರ ಘಟನೆ ನಡೆದಿದೆ. ದುಷ್ಕರ್ಮಿಗಳು ಮೇಯುತ್ತಿರುವ ಹಸುವಿನ ಮೇಲೆ ದಾಳಿ ನಡೆಸಿ, ಅದರ ಕೆಚ್ಚಲು ಕೊಯ್ಯುವ ಮೂಲಕ ಪೈಶಾಚಿಕ ಕ್ರೂರತೆಯನ್ನು ಮೆರೆದಿದ್ದಾರೆ.
ಹಸುವಿನ ಮಾಲೀಕರಾದ ವಿಜಯಕುಮಾರ್ ಎಂಬವರು ಈ ಕುರಿತು ಹೊಸನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಹಸು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿರುವುದು ಕಂಡುಬಂದಿದ್ದು, ಮನೆಯಲ್ಲಿಯೇ ತಾತ್ಕಾಲಿಕ ಚಿಕಿತ್ಸೆ ನೀಡಲಾಗುತ್ತಿದೆ.
ಹಸು ಮೇಯುತ್ತಿದ್ದ ವೇಳೆ ಈ ಕೃತ್ಯ ನಡೆದಿರುವುದು, ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ ಎಂಬ ಅನುಮಾನಕ್ಕೆ ಎಡೆಮಾಡಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಜಾನುವಾರುಗಳ ಮೇಲೆ ಕ್ರೌರ್ಯದ ಘಟನೆಗಳು ವರದಿಯಾಗುತ್ತಿವೆ.