ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಾರದ ಸಾಹಿತ್ಯ ಮಂಥನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾಗಿದ್ದ ವಿ ಶ್ರೀನಿವಾಸ ಪ್ರಸಾದ್ ರವರ ಕೊಡುಗೆಗಳ ಕುರಿತು ಸಂವಾದ ಜರುಗಿತು. ಶ್ರೀನಿವಾಸ್ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ತಮಿಳು ಸಂಘದ ಅಧ್ಯಕ್ಷರಾದ ಜಗದೀಶ್ ಹಾಗೂ ಬರಹಗಾರ ಲಕ್ಷ್ಮಿ ನರಸಿಂಹ ರವರು ಶ್ರೀನಿವಾಸ್ ಪ್ರಸಾದ್ ರವರು ಮೈಸೂರು ಭಾಗದ ಪ್ರಬಲ ನಾಯಕರು. ಕೇಂದ್ರ ಸಚಿವರಾಗಿ ರಾಜ್ಯ ಸಚಿವರಾಗಿ, ಆರುಬಾರಿ ಸಂಸದರಾಗಿ ತಮ್ಮ ಮಿತಿಯೊಳಗೆ ಉತ್ತಮ ಕಾರ್ಯವನ್ನು ನಿರ್ವಹಿಸಿದ್ದರು. ಪ್ರಾಮಾಣಿಕ ರಾಜಕಾರಣಿಯಾಗಿ ಜನಸಾಮಾನ್ಯರೊಂದಿಗೆ ಸದಾ ಕಾಲ ಬೆರೆತು ಕರ್ನಾಟಕವನ್ನು ಪ್ರತಿನಿಧಿಸಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಇಡೀ ರಾಷ್ಟ್ರಕ್ಕೆ ಬದ್ಧತೆಯಿಂದ ಸೇವೆ ಸಲ್ಲಿಸಿದವರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಬೆಳವಣಿಗೆ ದಿಕ್ಕಿನಲ್ಲಿ ಅವರ ಶ್ರೇಷ್ಠ ಕಾರ್ಯಗಳು ಮರೆಯಲಾಗದು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರ ಶ್ರೀನಿವಾಸ ಗೌಡ ಮಾತನಾಡಿ ಕನ್ನಡ ಸಂಘಟನೆಗಳ ಮೂಲಕ ಶ್ರೀನಿವಾಸ್ ಪ್ರಸಾದ್ ರವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಗಿತ್ತು. ಅಪಾರ ಜ್ಞಾಪಕ ಶಕ್ತಿ ,ದೃಢ ನಿರ್ಧಾರ ಹಾಗೂ ಸರ್ವರೊಂದಿಗೂ ಬೆರೆತು ಎಲ್ಲ ಜನಾಂಗಗಳ ಉದಯೋನ್ಮುಖ ನಾಯಕತ್ವದ ಬೆಳವಣಿಗೆಗೆ ಸಹಕಾರ ನೀಡಿದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶ್ರೀನಿವಾಸ ಪ್ರಸಾದ್ ಉತ್ತಮ ಜನನಾಯಕ. ಜನ ಸಮೂಹದ ಸಂಘಟನಾ ಶಕ್ತಿಯನ್ನು ಹೊಂದಿದ್ದ ಅವರ ನಡೆ ಮತ್ತು ನುಡಿ ಎರಡು ಒಂದೇ ಆಗಿತ್ತು. ಬಡವರ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದವರು. ಯಾವುದೇ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನದ ಮೂಲಕ ವಿಚಾರ ಮಂಡನೆ ಮಾಡುವ ಅವರ ಶೈಲಿ ಯುವಕರಿಗೆ ಮಾರ್ಗದರ್ಶನ. ಪ್ರಸಾದ್ ರವರು ಅಪ್ಪಟ ಕನ್ನಡದ ಅಭಿಮಾನಿಯಾಗಿದ್ದವರು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಕಾವೇರಿ ಹೋರಾಟದ ಸಂದರ್ಭದಲ್ಲಿ ಇಡಿ ರಾಜ್ಯದ ಸಮನ್ವಯತೆಯನ್ನು ತಂದಂತವರು. ನಾಡು ,ನುಡಿ ,ಜಲ ಭಾಷೆಯ ಹೋರಾಟದ ಸಂಘಟನೆಗಳ ಬೆನ್ನೆಲುಬಾಗಿ ಸದಾಕಾಲ ಪ್ರೋತ್ಸಾಹಿಸುತ್ತಿದ್ದ ಪ್ರಸಾದ್ ರವರು ಕನ್ನಡ ಸಂಘಟನೆಗಳ ಬಹುದೊಡ್ಡ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ವಿ ಶ್ರೀನಿವಾಸ ಪ್ರಸಾದ್ ರವರ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರ ಪ್ರಸಾದ್ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಳತೆ ಪ್ರಾಮಾಣಿಕತೆಯ ವ್ಯಕ್ತಿ ಪ್ರಸಾದ್. ಸ್ವಾಭಿಮಾನದ ಪ್ರತೀಕವಾಗಿ ಬದುಕಿ ತಮ್ಮ ರಾಜಕೀಯ ಜೀವನದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಯೋಚಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯ ಪದ್ಮ ಪುರುಷೋತ್ತಮ್, ಸರಸ್ವತಿ ,ಬಿಕೆ ಆರಾಧ್ಯ ,ಶಿವಲಿಂಗ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.