ಮೈಸೂರು : ಕ್ರೀಡೆ ಮತ್ತು ವ್ಯಾಸಂಗದಲ್ಲಿ ಅತ್ಯಂತ ಪ್ರತಿಭಾವಂತಳಾಗಿದ್ದ ಸರ್ಕಾರಿ ಶಾಲೆಯ ವಿನುತ ಎಂಬ ವಿದ್ಯಾರ್ಥಿನಿಯೊಬ್ಬಳು ಇದ್ದಕ್ಕಿದ್ದಂತೆ ಮಾರಕ ಮೂಳೆ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದು, ಆಕೆಯ ಜೀವ ಉಳಿಸಲು ಉನ್ನತ ಮಟ್ಟದ ಚಿಕಿತ್ಸೆ ಆಗಬೇಕಿದೆ. ಇದಕ್ಕಾಗಿ ಆಸ್ಪತ್ರೆಯವರು ೧೯ ಲಕ್ಷ ರೂ. ವೆಚ್ಚ ತಗಲುವುದಾಗಿ ಹೇಳಿದ್ದು, ದಾನಿಗಳು ನೆರವು ನೀಡುವಂತೆ ಆಕೆಯ ತಾಯಿ ಹೇಮಾ ಕೋರಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀರಂಗಪಟ್ಟಣ ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮದವರಾದ ನಮ್ಮ ಕುಟುಂಬ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ವಿನುತ ಶ್ರೀರಂಗಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಕ್ರೀಡೆ ಮತ್ತು ವ್ಯಾಸಂಗದಲ್ಲಿ ಸದಾ ಮುಂದಿದ್ದ ವಿನುತಾ ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಳಿದ್ದಾಳೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಕ್ಯಾನ್ಸರ್ ಈಗ ಎರಡನೇ ಹಂತದಲ್ಲಿದೆ. ಬಲಗೈ ಮೂಳೆಗೆ ಕ್ಯಾನ್ಸರ್ ತಗಲಿರುವ ಕಾರಣ ವಿನುತಾಳಿಗೆ ಕೈ ಎತ್ತಲು ಆಗುತ್ತಿಲ್ಲ. ನಮ್ಮಲ್ಲಿ ಬಿಪಿಎಲ್ ಕಾರ್ಡ್ ಬಿಟ್ಟರೆ ಬೇರೇನೂ ಇಲ್ಲ. ನನ್ನ ಪತಿಯೂ ನನ್ನಿಂದ ದೂರವಾಗಿದ್ದಾರೆ. ಕೂಲಿ ಮಾಡಿಕೊಂಡು ಹೊಟ್ಟೆ ಬಟ್ಟೆಗೆ ಹೊಂದಿಸುವುದೇ ಕಷ್ಟವಾಗಿದೆ. ಇದರಿಂದ ನನ್ನ ಮಗಳ ಪ್ರಾಣ ಉಳಿಸಲು ದಾನಿಗಳು ನೆರವು ನೀಡಬೇಕೆಂದು ಅವರು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿ ವಿನುತಾ, ಸೋಮಶೇಖರ್, ಕರಿಯಪ್ಪ ಲೇಬಗಿರಿ ಇದ್ದರು.
ದಾನಿಗಳು ಹಣ ನೀಡಬೇಕಾದ ವಿಳಾಸ: ಕರ್ನಾಟಕ ಬ್ಯಾಂಕ್ ಶ್ರೀರಂಗಪಟ್ಟಣ ಶಾಖೆ, ಅಕೌಂಟ್ ಸಂಖ್ಯೆ-೭೦೯೨೫೦೦೧೦೧೮೯೫೧೦೧, ಐಎಫ್ಎಸ್ಸಿ-ಕೆಆರ್ಬಿ೦೦೦೦೭೦೯, ಗೂಗಲ್ ಪೇ/ಫೋನ್ ಪೇ-೭೦೯೦೨೨೧೮೪ (ಹೇಮ)