ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ಗೆ ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ಕೋರ್ಟ್ ನಿರಾಕರಿಸಿದೆ. ಇದರೊಂದಿಗೆ ಅವರಿಗೆ ಈಗ ಹದಿನೈದು ಜನ ಅಧಿಕಾರಿ ಸಿಬ್ಬಂದಿಯಿಂದ 24 ತಾಸು ಭದ್ರತೆ ಕಲ್ಪಿಸಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲಲ್ಲಿರುವ ದರ್ಶನ್ಗೆ ದಿನದ 24 ಗಂಟೆಯೂ ಪೊಲೀಸ್ ಅಧಿಕಾರಿಗಳ ಭದ್ರತೆ ಕಲ್ಪಿಸಲಾಗಿದೆ. ಎಎಸ್ಪಿ ನೇತೃತ್ವದಲ್ಲಿ ಐವರು ಸಿಬ್ಬಂದಿಯ ನೇಮಕವಾಗಿದ್ದು, ಹದಿನೈದು ಜನ ಅಧಿಕಾರಿ ಸಿಬ್ಬಂದಿಯಿಂದ ದರ್ಶನ್ ಗೆ ಭದ್ರತೆ ನೀಡಲಾಗುತ್ತಿದೆ. ಮೂರು ಶಿಫ್ಟ್ ಗಳಂತೆ ಒಂದೊಂದು ಶಿಫ್ಟ್ ಗೆ ಐವರು ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದೆ.
ಸದ್ಯ ದರ್ಶನ್ ಕ್ವಾರಂಟೈನ್ ಬ್ಯಾರೆಕ್ ನಲ್ಲಿದ್ದಾರೆ. ದರ್ಶನ್ ಅವರ ಭೇಟಿಗೆ ಬೇರೆ ಆರೋಪಿಗಳು, ಕೈದಿಗಳಿಗೆ ನಿಷೇಧ ಹೇರಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ದರ್ಶನ್ ವಿಚಾರದಲ್ಲಿ ಜೈಲಾಧಿಕಾರಿಗಳು ಕಟ್ಟುನಿಟ್ಟಾಗಿದ್ದಾರೆ. ಕಾನೂನು ಉಲ್ಲಂಘನೆ ಆಗದಂತೆ ಅಧಿಕಾರಿಗಳು ಹೆಚ್ಚುವರಿ ಬಂದೋಬಸ್ತ್ ನೀಡುತ್ತಿದ್ದಾರೆ.
ಇನ್ನು ದರ್ಶನ್ ಹೆಚ್ಚುವರಿ ದಿಂಬು ಮತ್ತು ಹಾಸಿಗೆಯನ್ನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮತ್ತೆ ಅವರಿಗೆ ನಿರಾಸೆಯಾಗಿದೆ. ಮ್ಯಾನ್ಯುವಲ್ ನಂತೆ ಕನಿಷ್ಠ ಸೌಲಭ್ಯ ನೀಡಿ ಎಂದು ಕೋರ್ಟ್ ಆದೇಶಿಸಿದ್ದು, ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ನಿರಾಕರಿಸಿದೆ. ಮ್ಯಾನ್ಯುಯಲ್ ನಂತೆ ಜೈಲಾಧಿಕಾರಿಗಳು ದರ್ಶನ್ಗೆ ಒಂದು ಹೊದಿಕೆ, ತಟ್ಟೆ, ಲೋಟ ಮಾತ್ರ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ವಜಾವಾಗಿ ಜೈಲು ಸೇರಿರುವ ನಟ ದರ್ಶನ್ ಇತ್ತೀಚೆಗೆ ಮಾನಸಿಕವಾಗಿ ನರಕಯಾತನೆ ಅನುಭವಿಸುತ್ತಿದ್ದು, ಈ ಜೀವನವೇ ಬೇಡವೆಂದು ತೀರ್ಮಾನಿಸಿ ಕೋರ್ಟ್ ನಲ್ಲಿ ಸ್ವಲ್ಪ ವಿಷ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲಿನ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು 64 ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆದಿದ್ದು, ಸೆ. 9ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಲಾಗಿತ್ತು. ವಿಚಾರಣೆ ವೇಳೆ ನಟ ಇದಕ್ಕಿಂತ ವಿಷ ನೀಡಿ ಎಂದು ಕೋರಿದ್ದಾರೆ. ಕಳೆದ ಒಂದು ತಿಂಗಳಿಂದ ಬಿಸಿಲನ್ನೇ ನೋಡಿಲ್ಲ.. ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದೇನೆ, ನಿಮ್ಮಲ್ಲೊಂದು ಮನವಿ ದಯವಿಟ್ಟು ನನಗೆ ಸ್ವಲ್ಪ ವಿಷ ಇದ್ದರೆ ಕೊಟ್ಟು ಬಿಡಿ, ಕುಡಿದು ಸತ್ತು ಹೋಗುತ್ತಿನಿ ಎಂದು ಹೇಳಿದರು ಎನ್ನಲಾಗಿದೆ.
ನಟ ದರ್ಶನ್ ಮಾತನ್ನು ಕೇಳಿದ ನ್ಯಾಯಾಧೀಶರು, ಹಾಗೆಲ್ಲಾ ಮಾತನಾಡಬಾರದು, ನೀವು ಮನವಿ ಮಾಡಿರುವ ಬಗ್ಗೆ ಇಂದು ಮಧ್ಯಾಹ್ನ ಆದೇಶ ಬರಲಿದೆ ಎಂದು ಹೇಳಿದ್ದರು. ಈ ಹಿಂದೆ ಬೆಂಗಳೂರು ಜೈಲಿನಿಂದ ನಟ ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ವಿಚಾರಾಣಾಧೀನ ಕೈದಿ ಮತ್ತು ಶಿಕ್ಷಿತ ಅಪರಾಧಿ ಗಳ ಮಧ್ಯೆ ತಾರತಮ್ಯ ಮಾಡುವಂತಿಲ್ಲ. ಅದೇ ರೀತಿ ಈ ಪ್ರಕರಣದ ಆರೋಪಿ ನಟ ದರ್ಶನ್ ಅಂತಾ, ಬೇರೆ ಕೈದಿಗಳ ಜೊತೆ ತಾರತಮ್ಯ ಮಾಡುವಂತಿಲ್ಲ ಎಂದು ವಾದಿಸಿದ್ದರು.
ಜೈಲಿನಲ್ಲಿ ಏನಾದರೂ ಸೌಲಭ್ಯ ಬೇಕು ಅಂದ್ರೆ ದುಡ್ಡು ಕೊಡಬೇಕು. ದರ್ಶನ್ ಬಲಗೈಗೆ ಆಪರೇಷನ್ ಆಗಿದೆ, ಶೀತದಿಂದ ಕೈ ಅಲ್ಲಾಡಿಸಲು ಕೂಡ ಸಾಧ್ಯವಾಗ್ತಿಲ್ಲ. ಇಲ್ಲಿ ದಯಾನಂದ್ ಅವರ ಜೇಬಿನಿಂದ ಕೊಡಿ ಅಂತ ಕೇಳುತ್ತಿಲ್ಲ. ಕಾನೂನಾತ್ಮಕವಾಗಿ ಕೊಡಬೇಕಾದ ಕನಿಷ್ಠ ಸೌಲಭ್ಯ ಕೇಳುತ್ತಿದ್ದೇವೆ ಎಂದು ದರ್ಶನ್ ಪರ ವಕೀಲರು ಹೇಳಿದರು.