ಚೆನ್ನೈ: ಕರ್ನಾಟಕದಲ್ಲಿ ಭಾಷಾ ಗದ್ದಲವೆಬ್ಬಿಸಿದ ನಟ, ರಾಜಕಾರಣಿ ಕಮಲ್ ಹಾಸನ್ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳಿಗೆ ಇದೇ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಮುಂದಿನ ಸೋಮವಾರದವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ಕಮಲ್ ಹಾಸನ್ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ತನ್ನ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷಕ್ಕೆ ನೀಡಲು ನಿರ್ಧರಿಸಿದೆ. ತಮ್ಮ ನಾಮಪತ್ರಗಳನ್ನು ವಿಧಾನಸಭೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ಸಲ್ಲಿಸಿದರು. ಕಮಲ್ ಹಾಸನ್ 2018 ರಲ್ಲಿ ರಾಜಕೀಯ ಪ್ರವೇಶಿಸಿದರು, ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಹಾಸನ್ ಅವರ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದರು. 2024ರ ಲೋಕಸಭಾ ಚುನಾವಣೆಗೆ ಮೊದಲು ಎರಡೂ ಪಕ್ಷಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಬರುವ ರಾಜ್ಯಸಭಾ ಚುನಾವಣೆಗೆ ಡಿಎಂಕೆ ತನ್ನ ಅಭ್ಯರ್ಥಿಗಳನ್ನು ಔಪಚಾರಿಕವಾಗಿ ಘೋಷಿಸಿದೆ.
ಹಿರಿಯ ವಕೀಲ ಪಿ ವಿಲ್ಸನ್, ಕವಿ ಮತ್ತು ಬರಹಗಾರ್ತಿ ಸಲ್ಮಾ ಮತ್ತು ಮಾಜಿ ಸಚಿವ ಎಸ್.ಆರ್. ಶಿವಲಿಂಗಂ ಸೇರಿದಂತೆ ಮೂವರು ಇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ಜುಲೈ 24, 2025 ರಂದು ನಿವೃತ್ತರಾಗಲಿದ್ದಾರೆ. ಇದರಲ್ಲಿ ಪಿಎಂಕೆಯ ಅನ್ಬುಮಣಿ ರಾಮದಾಸ್, ಎಂಡಿಎಂಕೆ ನಾಯಕ ವೈಕೊ ಸೇರಿದ್ದಾರೆ.