ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳು ಮತ್ತು ಅವುಗಳ ವೈದ್ಯಕೀಯ ಪರಿಣಾಮಕತ್ವದ ಕುರಿತಂತೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹಾಗೂ ಯೋಗ ಗುರು ರಾಮದೇವ್ ಅವರ ಓರ್ವ ಸಹಾಯಕ ಸುಪ್ರೀಂ ಕೋರ್ಟಿನಿಂದ ಕ್ಷಮೆಯಾಚಿಸಿದ್ಧಾರೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ನೋಟಿಸಿಗೆ ಪ್ರತಿಕ್ರಿಯಿಸದೇ ಇದ್ದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಎಪ್ರಿಲ್ ೨ರಂದು ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಅವರಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದ ನಂತರ ನಂತರ ಮಂಗಳವಾರ ಅಫಿಡವಿಟ್ ಸಲ್ಲಿಸಿ ಕ್ಷಮೆಯಾಚಿಸಲಾಗಿದೆ.
ಪ್ರಾಚೀನ ಆಯುರ್ವೇದದ ಕುರಿತಾದ ಸಂಶೋಧನೆಯ ಬೆಂಬಲದೊಂದಿಗೆ ಸಿದ್ಧಪಡಿಸಲಾದ ಪತಂಜಲಿ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೆ ಸಲಹೆ ನೀಡುವ ಉದ್ದೇಶವನ್ನಷ್ಟೇ ಕಂಪೆನಿ ಹೊಂದಿದೆ ಎಂದು ಅವರು ತಮ್ಮ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.