ಮಂಗಳೂರು ದಕ್ಷಿಣ ಕನ್ನಡ: ಮಂಗಳೂರು ನಗರದ ಹೊರವಲಯದ ಅಡ್ಯಾರ್ನ ಬೊಂಡ ಫ್ಯಾಕ್ಟರಿಯಿಂದ ಖರೀದಿಸಿ ಕುಡಿದ ಎಳನೀರಿನಿಂದ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಶೀಘ್ರವೇ ವರದಿ ಬರಲಿದೆ. ಕಳೆದ ಸೋಮವಾರ ಖರೀದಿಸಿದ ಎಳನೀರು ಕುಡಿದ ಬಳಿಕ ಅಸ್ವಸ್ಥಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಕರಣದ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಚ್. ಆರ್. ತಿಮ್ಮಯ್ಯ ಹೇಳಿದ್ದಾರೆ.
ಅವರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಎಪ್ರಿಲ್ ೮ರಂದು ಅಡ್ಯಾರ್ನ ಫ್ಯಾಕ್ಟರಿಯಿಂದ ಎಳನೀರು ಕುಡಿದವರಲ್ಲಿ ಮಾತ್ರ ಅಸ್ವಸ್ಥಗೊಂಡಿದ್ದಾರೆ. ಒಂದು ಮನೆಯಲ್ಲಿ ನಾಲ್ಕು ಮಂದಿ ಕುಡಿದಿದ್ದರೆ ನಾಲ್ವರೂ ಅಸ್ವಸ್ಥರಾಗಿದ್ದು, ಕುಡಿಯದವರಿಗೆ ಏನೂ ಆಗಿಲ್ಲ. ಹಾಗಾಗಿ ಮೇಲ್ನೋಟಕ್ಕೆ ಎಳನೀರು ಕುಡಿದ ಬಳಿಕ ಸಂಭವಿಸಿದ ಘಟನೆ ಎಂಬುದಾಗಿ ಕಂಜು ಬಂದಿದೆ. ಆದರೆ ವರದಿ ಬಾರದೆ ಎಳನೀರೇ ಕಾರಣ ಎಂದು ಎಂದು ಕರಾರುವಕ್ಕಾಗಿ ಹೇಳಲಾಗದು.
ಆ ದಿನ ಅಲ್ಲಿಂದ ಎಳನೀರು ಖರೀದಿಸಿ ಕೊಂಡು ಹೋಗಿ ಮನೆಯಲ್ಲಿ ತಡವಾಗಿ ಕುಡಿದ ಕಾರಣ ಅಥವಾ ಆ ದಿನದ ಬೊಂಡ ಜ್ಯೂಸ್ ತಯಾರಿಯ ಬ್ಯಾಚ್ನಲ್ಲಿ ಆಗಿರುವ ವ್ಯತ್ಯಾಸದಿಂದಲೂ ಆಗಿರುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ರೋಗಿಗಳ ಜತೆ ನಿರಂತರ ಭೇಟಿಯ ಮೂಲಕ ಈ ವಿಚಾರವನ್ನು ಕಂಡುಕೊಳ್ಳಲಾಗಿದೆ. ಉಳಿದಂತೆ ಪ್ರಯೋಗಾಲಯದ ವರದಿಯನ್ನು ಎದುರು ನೋಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ವಿವರ ನೀಡಿದರು.