ಹೊಸದಿಲ್ಲಿ : ಅಗ್ನಿಪಥ್ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನು ಬಯಸುತ್ತಿರುವ ದೇಶದ ಯುವಕರಿಗೆ ಘೋರ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಯುವಕರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿ ಪ್ರಕ್ರಿಯೆ ಅಂತ್ಯಗೊಂಡಿರುವುದರಿಂದ ಸುಮಾರು ೨ ಲಕ್ಷ ಯುವಕ-ಯುವತಿಯರ ಭವಿಷ್ಯ ಅತಂತ್ರವಾಗಿದೆ ಎಂದು ಖರ್ಗೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿರುವುದರಿಂದ ಖರ್ಗೆ ಈ ಪತ್ರ ಬರೆದಿದ್ದಾರೆ.
ಅತ್ಯಂತ ಮಹತ್ವದ ವಿಷಯದ ಕುರಿತು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ನಿಮಗೆ ಪತ್ರ ಬರೆಯುತ್ತಿದ್ದೇನೆ. ಭಾರತ ಸರ್ಕಾರವು ತೆಗೆದುಕೊಂಡ ನಿರ್ಧಾರಗಳಿಂದ ಸುಮಾರು ಎರಡು ಲಕ್ಷ ಯುವಕ-ಯುವತಿಯರ ಭವಿಷ್ಯವು ಇಂದು ಅನಿಶ್ಚಿತತೆಗೆ ಒಳಗಾಗಿದೆ ಎಂದು ಪತ್ರವನ್ನು ಆರಂಭಿಸಿದ್ದಾರೆ.
ಇತ್ತೀಚೆಗೆ ಭಾರತೀಯ ಸಶಸ್ತ್ರ ಪಡೆಗಳ ಸೇವೆಗೆ ಆಯ್ಕೆಯಾದ ಯುವಕ-ಯುವತಿಯರ ಗುಂಪನ್ನು ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿತು. ಆದರೆ ನಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಸರ್ಕಾರ ನಿರಾಕರಿಸಿದೆ.
೨೦೧೯ ಮತ್ತು ೨೦೨೨ ರ ನಡುವೆ ಸುಮಾರು ಎರಡು ಲಕ್ಷ ಯುವಕ-ಯುವತಿಯರು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆಗೆ ಆಯ್ಕೆಯಾಗಿದ್ದೆವು ಎಂದು ನನಗೆ ಹೇಳಿದರು. ಈ ಯುವಕ-ಯುವತಿಯರು ಕಠಿಣ ಶ್ರಮ ವಹಿಸಿ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ೨೦೨೨ರ ಮೇ ೩೧ವರೆಗೆ ತಮ್ಮ ಕನಸುಗಳನ್ನು ಈಡೇರಲಿದೆ ಎಂದು ನಂಬಿದ್ದರು ಮತ್ತು ಆರ್ಡರ್ ಕಾಪಿ ಕೈಗೆ ಸಿಗಲು ಕಾಯುತ್ತಿದ್ದರು. ಆದರೆ, ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅವರೆಲ್ಲರ ಕನಸಿಗೆ ತಣ್ಣೀರೆರಚಿತು ಎಂದು ತಿಳಿಸಿದ್ದಾರೆ.