ಮಂಗಳೂರು: ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯಡಿ, ಮುಂದಿನ 5 ವರ್ಷದಲ್ಲಿ ಮಂಗಳೂರನ್ನು ದೇಶದ ಪ್ರಮುಖ ಉದ್ದಿಮೆ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಹಮ್ಮಿಕೊಂಡಿರುವ ‘ಬೊಲ್ಪು – ಅವಕಾಶ ನವೋದಯʼ ಯೋಜನೆಯು ಇದೀಗ ಮಹತ್ವದ ಘಟ್ಟ ತಲುಪಿದೆ.
ನವೋದ್ಯಮ ಸಂಸ್ಥಾಪಕರಿಗೆ ದಿಕ್ಸೂಚಿಯಾಗುವ ಮತ್ತು ಮಾರ್ಗದರ್ಶಕರನ್ನು ಒದಗಿಸುವ ಈ ಯೋಜನೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಅಂತಿಮ ದಿನಾಂಕದವರೆಗೆ ಒಟ್ಟು 850ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಐಡಿಯಾಗಳ ಕುರಿತು ಅರ್ಜಿ ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಅಂತಿಮವಾಗಿ ಒಟ್ಟು 11 ವಿಭಿನ್ನ ಹಾಗೂ ನವೀನ ಆಲೋಚನೆಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಈ ಭಾವಿ ನವೋದ್ಯಮಿಗಳ ಜತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಯೆಯ್ಯಾಡಿಯ ಖಾಸಗಿ ಹೊಟೇಲ್ ನಲ್ಲಿ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ.ಚೌಟ ಅವರು, ದಕ್ಷಿಣ ಕನ್ನಡದ ಸಾಮರ್ಥ್ಯಕ್ಕೆ ತಕ್ಕಂತೆ ಮುಂದಿನ 5 ವರ್ಷಗಳಲ್ಲಿ ಕನಿಷ್ಠ 50 ಯಶಸ್ವಿ ಉದ್ಯಮಶೀಲತೆಯ ಕಥೆಗಳನ್ನು ಸೃಷ್ಟಿಸುವುದು ಈ ಬೊಲ್ಪು ಯೋಜನೆಯ ಮುಖ್ಯ ಗುರಿ. ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯ ‘ಸ್ಟಾರ್ಟ್-ಅಪ್ ಇಂಡಿಯಾ’ದ 11ನೇ ವರ್ಷದಲ್ಲಿ ನಾವಿರುವಾಗ 11 ವಿಭಿನ್ನ ಐಡಿಯಾಗಳು ಬೊಲ್ಪು ಯೋಜನೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಹೀಗಿರುವಾಗ ನವೋದ್ಯಮಿಗಳು ಯಾವುದೇ ಅಡೆ-ತಡೆ ಅಥವಾ ಸವಾಲುಗಳ ಬಗ್ಗೆ ಯೋಚಿಸದೆ ಸಾಧ್ಯತೆಗಳತ್ತ ಗಮನಹರಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಯಾಕೆಂದರೆ ಯಶಸ್ಸು ಅಥವಾ ವೈಫಲ್ಯವು ವ್ಯಕ್ತಿಯ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ನವೋದ್ಯಮ ಸ್ಥಾಪನೆಗೆ ಮುಂದಾಗಿರುವವರಿಗೆ ಸೂಕ್ತ ಉತ್ತೇಜನ ನೀಡಿದ್ದಾರೆ.
ಮಂಗಳೂರನ್ನು ಮುಂದಿನ ದೊಡ್ಡ ಸ್ಟಾರ್ಟ್-ಅಪ್ ಹಬ್ ಆಗಿ ರೂಪಿಸುವ ಗುರಿಯೊಂದಿಗೆ, ಈ ಯೋಜನೆಯಲ್ಲಿ 50% ಮಹಿಳಾ ಉದ್ಯಮಿಗಳಿರಬೇಕೆಂಬ ಆಶಯ ವ್ಯಕ್ತಪಡಿಸಿದ ಅವರು ‘ಬೊಲ್ಪು’ ಮೆಂಟರ್ಗಳಿಗೆ ಇದೇವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೊಲ್ಪುವಿನ 11 ನವೋದ್ಯಮ ಯೋಜನೆಗಳು:
ಈ ಕಾರ್ಯಕ್ರಮದಡಿ ಆಯ್ಕೆಯಾದ 11 ನವೋದ್ಯಮ ಆಲೋಚನೆಗಳು ಅತ್ಯಂತ ವೈವಿಧ್ಯಮಯವಾಗಿದ್ದು, ಮಂಗಳೂರಿನ ಭವಿಷ್ಯದ ಉದ್ಯಮ ರಂಗಕ್ಕೆ ಹೊಸ ಭರವಸೆ ನೀಡಿವೆ. ನೀಲ್ ಕೆವಿನ್ ಮಾರ್ಟಿಸ್ ಅವರ ಝಪ್ಪಲ್ ಲ್ಯಾಬ್ಸ್ ಮೂಲಕ ಬ್ಲಾಕ್ಚೈನ್ ತಂತ್ರಜ್ಞಾನದ ಐಡಿಯಾ ಹಾಗೂ ಅಭಿನಂದನ ಅವರ ಸತ್ವ ಬೆವರೇಜಸ್ ಮೂಲಕ ಡೈರಿ ಪಾನೀಯಗಳ ಕಲ್ಪನೆ ಆಯ್ಕೆಯಾಗಿದೆ. ಸಂಸ್ಕೃತಿ ಸಂರಕ್ಷಣೆಯ ಹಾದಿಯಲ್ಲಿ ಸಿಂಧೂರ ಟಿ.ಪಿ ಅವರ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಪರಿಕಲ್ಪನೆ ಗಮನ ಸೆಳೆದಿದ್ದರೆ, ಪ್ರೀತಿ ಮತ್ತು ಗಣೇಶ್ ನಾಯಕ್ ಅವರು ಪ್ರಸ್ತುತಪಡಿಸಿದ ಜೂಸ್ ಬಾಟಲ್ ಐಡಿಯಾವು 85% ಮಹಿಳಾ ಉದ್ಯೋಗಿಗಳ ಸಬಲೀಕರಣದ ಉದ್ದೇಶ ಹೊಂದಿದೆ.
ತಂತ್ರಜ್ಞಾನ ಮತ್ತು ಪರಿಸರ ವಿಭಾಗದಲ್ಲಿ ಡಾ. ಚಂದ್ರಿಕಾ ತಂತ್ರಿ ಅವರ ಎಕೋಪೋಲಿ ಬಯೋಟೆಕ್, ಡಾ. ನಿಖಿಲ್ ಎಸ್. ಶೆಟ್ಟಿ ಅವರ ಬಯೋಮೆಡ್ ಇಂಪ್ಲಾಂಟ್ಸ್, ಮತ್ತು ಸಾಕ್ಷತ್ ರೈ ಕೆ. ಹಾಗೂ ದುರ್ಗಾದಾಸ್ ಶೆಟ್ಟಿ ಅವರ ಅನಾಹತಂ. ಐ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಸೇವೆಯ ಆಲೋಚನೆಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ. ಹಾಗೆಯೇ, ಯುವ ಎಂಜಿನಿಯರ್ ಶೇಷಪ್ರಸಾದ್ ಭಟ್ ಅವರ ವ್ಯಾನಿಕಾ ಇನ್ನೋವೇಶನ್ಸ್, ವಸಂತ್ ಮಾಧವ್ ಕಾಮತ್ ಅವರ ಹೈಡ್ರೋಗ್ರೀನ್ಸ್, ಮಿಥುಲ್ ದಾಸ್ ಅವರ ದಾಸಪೈಲಟ್ (PLUGFLY) ಡ್ರೋನ್ ತಂತ್ರಜ್ಞಾನದ ಕಲ್ಪನೆ ಮತ್ತು ಗೌರವ್ ಗಣೇಶ್ ಶೆಟ್ಟಿ ಅವರ ಕೆನರಾ ಫಾರ್ಮ್ಸ್ ರಾಸಾಯನಿಕ ಮುಕ್ತ ಡೈರಿ ಉತ್ಪನ್ನಗಳ ಐಡಿಯಾಗಳು ಮಂಗಳೂರಿನ ಮುಂದಿನ ಯಶೋಗಾಥೆಯ ಭಾಗವಾಗಲು ಸಜ್ಜಾಗಿವೆ.
ಬೊಲ್ಪು ತಂಡವು ಈ ಎಲ್ಲಾ 11 ಮಂದಿ ಭಾವಿ ಉದ್ಯಮಿಗಳಿಗೆ ಮುಂದಿನ ದಿನಗಳಲ್ಲಿ ತಜ್ಞರ ಮೂಲಕ ನಿರಂತರ ಮಾರ್ಗದರ್ಶನ ನೀಡಲಿದ್ದು, ಅವರ ಆಲೋಚನೆಗಳು ನೈಜ ಉದ್ಯಮಗಳಾಗಿ ಬದಲಾಗಲು ಸಂಪೂರ್ಣ ಬೆಂಬಲ ನೀಡಲಿದೆ.
ವರದಿ: ಶಂಶೀರ್ ಬುಡೋಳಿ, ಮಂಗಳೂರು



