ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಜೂನ್ 12ರಂದು ಮಧ್ಯಾಹ್ನ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಓರ್ವ ಪ್ರಯಾಣಿಕ ಬದುಕುಳಿದಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಅವರು, “ಯಾರಾದರೂ ಬದುಕುಳಿದಿರುವ ಸಾಧ್ಯತೆ ಬಹಳ ಕಡಿಮೆ” ಎಂದು ತಿಳಿಸಿದ್ದರು. ಆದರೆ ಈ ಭೀಕರ ದುರಂತದ ನಡುವೆ ಪವಾಡಸದೃಶ ರೀತಿಯಲ್ಲಿ 11A ಸೀಟಿನಲ್ಲಿ ಕುಳಿತಿದ್ದ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಬದುಕುಳಿದಿದ್ದಾರೆ. ಟೇಕಾಫ್ ಆದ 30 ಸೆಕೆಂಡುಗಳಲ್ಲಿ ಭಾರಿ ಶಬ್ಧ ಕೇಳಿ ವಿಮಾನ ಪತನಗೊಂಡಿತು ಎಂದು ಅವರು ಹೇಳಿದ್ದಾರೆ.
ವಿಶ್ವಾಸ್ ಕುಮಾರ್ ರಮೇಶ್ ಎದೆ, ಕಣ್ಣು, ಕಾಲುಗಳಿಗೆ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪತನ ಸ್ಥಳದಿಂದ ನಡೆದುಕೊಂಡು ಅಂಬುಲೆನ್ಸ್ಗೆ ಹತ್ತಿದ ಅವರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ನಾನು ಎದ್ದು ನೋಡಿದಾಗ ಸುತ್ತಲೂ ಶವಗಳ ರಾಶಿ ಹಾಗೂ ಛಿದ್ರಗೊಂಡ ವಿಮಾನದ ಭಾಗಗಳು ಕಾಣಿಸಿಕೊಂಡವು. ಭಯದಿಂದ ಓಡಲು ಆರಂಭಿಸಿದ್ದೆ. ಯಾರೋ ಸಹಾಯ ಮಾಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದರು,” ಎಂದಿದ್ದಾರೆ.