Saturday, June 21, 2025
Google search engine

Homeರಾಜಕೀಯಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಮುಲಾಜಿಲ್ಲದೇ ಕ್ರಮ : ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ

ಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಮುಲಾಜಿಲ್ಲದೇ ಕ್ರಮ : ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ

ಬೀದರ್: ವಸತಿ ಯೋಜನೆಯ ಭ್ರಷ್ಟಾಚಾರದಲ್ಲಿ ಯಾರೇ ಇದ್ರು ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೀದರ್‌ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಐತಿಹಾಸಿಕ ಬೀದರ್ ಕೋಟೆಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖಂಡ್ರೆ, ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಜಮೀರ್ ಇಲಾಖೆಯ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ನಮ್ಮ ಸರ್ಕಾರ ಭ್ರಷ್ಟಾಚಾರ ವಿರೋಧಿ. ಕಾಂಗ್ರೆಸ್ ಒಂದು ಶುದ್ಧ ಆಡಳಿತದ ಪಕ್ಷ. ನಮ್ಮಲ್ಲಿ ಝೀರೋ ಭ್ರಷ್ಟಾಚಾರವಿದೆ ಎಂದು ದೃಢವಾಗಿ ಹೇಳಿದರು.

ವಸತಿ ಯೋಜನೆಯಡಿ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳೆಂದು ಹೆಸರು ಕೇಳಿಬಂದರೆ, ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ತಿಳಿಸಿದರು. “ಪುರಾವೆ ಇದ್ದರೆ ಯಾರ ಮೇಲಾದರೂ ಕ್ರಮ ಅನಿವಾರ್ಯ. ಇದು ರಾಜಕೀಯ ನಾಟಕವಲ್ಲ, ಜನರ ಹಕ್ಕುಗಳ ವಿಷಯ” ಎಂದು ಅವರು ಹೇಳಿದರು.

ಭ್ರಷ್ಟಾಚಾರದ ಆರೋಪಗಳು ಬಿಜೆಪಿಯ ಷಡ್ಯಂತ್ರವೆಂದು ಖಂಡ್ರೆ ಆರೋಪಿಸಿದರು. “ಬಿಜೆಪಿ ಸುಳ್ಳು ಆರೋಪಗಳ ಮೂಲಕ ಜನರ ಗಮನವನ್ನು ಬೇರೆಡೆ ಕರೆದೊಯ್ಯಲು ಯತ್ನಿಸುತ್ತಿದೆ. ನಮ್ಮ ಜನಪ್ರಿಯತೆಯಿಂದ ಬಿಜೆಪಿ ಕಂಗಾಲಾಗಿದೆ” ಎಂದು ತಿರುಗೇಟು ನೀಡಿದರು.

ಯೋಗ ದಿನದ ಪ್ರಯುಕ್ತ ಮಾತನಾಡಿದ ಖಂಡ್ರೆ, “ಯೋಗ ದೈಹಿಕ ಹಾಗೂ ಮಾನಸಿಕ ಶಕ್ತಿಗೆ ಆಧಾರ. ಧ್ಯಾನ, ಪ್ರಾಣಾಯಾಮದಿಂದ ಏಕಾಗ್ರತೆ ಬೆಳೆಯುತ್ತದೆ. ಜನರು ಯೋಗವನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಬೇಕು” ಎಂದು ಸಲಹೆ ನೀಡಿದರು. “ನಾನು ಪ್ರತಿದಿನವೂ ಯೋಗ ಮಾಡಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಭಾಗವಾಗಿ ನೂತನ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಈಗಾಗಲೇ ₹612 ಕೋಟಿ ಅನುದಾನ ನೀಡಲಾಗಿತ್ತು. ಇದೀಗ ರಾಜ್ಯ ಸಚಿವ ಸಂಪುಟ ₹740 ಕೋಟಿಗೆ ಪರಿಷ್ಕಾರ ಮಾಡಿದ್ದು, ಈ ಕುರಿತು ಖಂಡ್ರೆ ಅವರು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular