ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಡೋರ್ನಳ್ಳಿಯ ಸಂತ ಅಂಥೋಣಿ ಯವರ ಬಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವದ ಮೆರವಣಗೆ ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿoದ ನಡೆಯಿತು.
ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಅವರು ಬೆಳಿಗ್ಗೆ ೧೦ ಗಂಟೆಯಲ್ಲಿ ಹಬ್ಬದ ಆಡಂಬರ ಗಾಯನ ಪೂಜೆಗೆ ಚಾಲನೆ ನೀಡಿದರು. ಬಸಿಲಿಕಾದ ಧರ್ಮಗುರು ಡೇವಿಡ್ ಸಗಾಯರಾಜ್, ಕೊಲ್ಕತ್ತಾ ಧರ್ಮಗುರು ರಾಬರ್ಟ್ ಗ್ರೆಗೊರಿ ಮೊಂತೇರೊ, ಮೈಸೂರು ಧರ್ಮಕ್ಷೇತ್ರದ ಕೋಶಾಧಿಕಾರಿ ಸೆಬಾಸ್ಟಿಯನ್ ಅಲೆಕ್ಸಾಂಡರ್, ಯಾದವಗಿರಿ ಧರ್ಮಗುರು ರೋಹನ್, ಬೋಗಾದಿಯ ಧರ್ಮಗುರು ವಾಲೆಂಟೆನ್ ರಾಜೇಂದ್ರ ಕುಮಾರ್, ಮೈಸೂರು ರೆಕ್ಟರ್ ಗುರು ಓಸ್ವಾಲ್ಡ್ ಕ್ರಾಸ್ತ, ಮಂಡ್ಯ ಧರ್ಮಗುರು ಮರಿರಾಜ್, ಶ್ರೀರಾಂಪುರ ಧರ್ಮಗುರು ಆರ್.ಆರೋಗ್ಯಸ್ವಾಮಿ, ಮೈಸೂರು ಧರ್ಮಕ್ಷೇತ್ರದ ಸಹಾಯಕ ಕೋಶಾಧಿಕಾರಿ ಯೇಸು ಪ್ರಸಾದ್ ಅವರುಗಳು ಹಬ್ಬದ ಆಡಂಬರ ಗಾಯನ ಬಲಿಪೂಜೆ ನಡೆಸಿಕೊಟ್ಟರು.
ಬಳಿಕ ಸಂಜೆ ೭ ಗಂಟೆಗೆ ಬಸಿಲಿಕಾದ ಮುಂಭಾಗದ ಸಾವಿರಾರು ಜನರ ಸಮ್ಮುಖದಲ್ಲಿ ಸಂತ ಅಂಥೋಣಿ ಯವರ ವೈಭವದ ತೇರಿನ ಮೆರವಣಿಗೆ ನಡೆಯಿತು. ಬಸಿಲಿಕಾ ಚರ್ಚ್ನ ಆಡಳಿತಾಧಿಕಾರಿ ಪ್ರವೀಣ್ ಪೆದ್ರು ಹಾಗೂ ಧರ್ಮಗುರು ಡೇವಿಡ್ ಸಗಾಯರಾಜ್ ಅವರು ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.
ಐತಿಹಾಸಿಕ ಮತ್ತು ಅತ್ಯಂತ ಹೆಸರುವಾಸಿಯಾದ ಡೋರ್ನಳ್ಳಿ ಸಂತ ಅಂತೋಣಿ ಯವರ ವಾರ್ಷಿಕ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಜನರು ಪಾಲ್ಗೊಂಡು ಗಾಯನಪೂಜೆ ವೀಕ್ಷಿಸಿ ಅಂತೋಣಿ ಯವರ ದರ್ಶನ ಪಡೆದರು.