ಬೆಂಗಳೂರು: ಕರಾವಳಿ ಪ್ರದೇಶಗಳಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಹೇಳಿದರು. ಮಂಗಳೂರಿನ ಎಸ್ಎಎಫ್ ಕಚೇರಿಯಲ್ಲಿ ಇಂದು ನಡೆದ ಕೋಮು ಸಂಘರ್ಷ ನಿಗ್ರಹದ ವಿಶೇಷ ಕಾರ್ಯಪಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೇಶದಲ್ಲಿಯೇ ಮೊದಲು ಕೋಮು ಸಂಘರ್ಷ ನಿಯಂತ್ರಣ ಪಡೆಯನ್ನು ಕರ್ನಾಟಕದಲ್ಲಿ ಆರಂಭಿಸುತ್ತಿರುವುದು ಹೆಮ್ಮೆ,” ಎಂದರು.
ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಕಂಪನಿಯಂತೆ ಮೂರು ಘಟಕಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ ಕಂಪನಿಯಲ್ಲಿ 26 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರಲಿದ್ದು, ಪಶ್ಚಿಮ ವಲಯ ಐಜಿಪಿ ಮುಖ್ಯಸ್ಥಿಕೆಯಲ್ಲಿ 1 ಎಸ್ಪಿ, 1 ಡಿವೈಎಸ್ಪಿ, 1 ಸಹಾಯಕ ಕಮಾಂಡೆಂಟ್, 4 ಟಿಐ, 4 ಆರ್ಪಿಐ, 14 ಪಿಎಸ್ವೈ ಅಥವಾ ಆರ್ಎಸ್ಐಗಳು, 210 ಪೊಲೀಸ್ ಸಿಬ್ಬಂದಿಗಳು ಸೇರಿ ಒಟ್ಟು 288 ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲಾಗುವುದು ಎಂದರು.
ಈ ತಂಡ ಮತೀಯ ಚಟುವಟಿಕೆಗಳ ಮೇಲೆ ನಿಗಾ ಇಡುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಒದಗಿಸುವುದು, ಸ್ಥಳೀಯ ಪೊಲೀಸರಿಗೆ ನೆರವಾಗುವುದು, ಗುಪ್ತಚರ ಮಾಹಿತಿ ಸಂಗ್ರಹಣೆ, ಹಾಗೂ ಜನರಲ್ಲಿ ಶಾಂತಿಯುತ ಭಾವನೆ ಮೂಡಿಸುವ ಜವಾಬ್ದಾರಿ ಹೊತ್ತಿದೆ.