ಯಳಂದೂರು : ತಾಲೂಕಿನಲ್ಲಿ ಕ್ರೀಡಾಂಗಣ ಇಲ್ಲದೆ ಕ್ರೀಡೆಗಳನ್ನು ಆಯೋಜಿಸಲು ಪಕ್ಕದ ತಾಲೂಕಿಗೆ ತೆರಳುವ ಸ್ಥಿತಿ ಇದೆ. ಇದನ್ನು ನಿರ್ಮಿಸುವ ನಿಟ್ಟಿನಲ್ಲಿ ಯುವಜನ ಸೇವೆಗಳು ಹಾಗೂ ಕ್ರೀಡಾ ಇಲಾಖೆಯ ಸಚಿವರು ಮುಂದಾಗಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ ಮಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಅವರು ಭಾಗವಹಿಸಿ ಮಾತನಾಡಿ, ಯಳಂದೂರು ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸೂಕ್ತ ಕ್ರೀಡಾಂಗಣವಿಲ್ಲ ಇದನ್ನು ಆಯೋಜಿಸಲು ಪಕ್ಕದ ತಾಲೂಕುಗಳಿಗೆ ತೆರಳುವ ಸ್ಥಿತಿ ಇದೆ. ಇದರಿಂದ ಇಲ್ಲಿಯ ವಿದ್ಯಾರ್ಥಿಗಳು ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಯುವಜನಸೇವೆ ಹಾಗೂ ಕ್ರೀಡಾ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದರೆ ಇಲ್ಲಿ ಜಾಗ ಗುರುತಿಸಿಕೊಟ್ಟಿಲ್ಲ. ಜಾಗ ಗುರುತಿಸಿಕೊಟ್ಟರೆ ಇದಕ್ಕೆ ಬೇಕಾದ ಅನುದಾಹವನನು ಕೊಡಲು ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು. ಇದಕ್ಕೆ ಶಾಸಕ ಕೃಷ್ಣಮೂರ್ತಿ ಉತ್ತರಿಸಿ ಈಗಾಗಲೇ ಇಲಾಖೆಯ ಅಧಿಕಾರಿಗಳಿಂದ ಜಾಗ ಸರ್ವೇ ಮಾಡಿಸಲಾಗಿದೆ. ಸೂಕ್ತ ಜಾಗ ಕೊಡಿಸಲು ನಾನು ಶ್ರಮ ಪಡುತ್ತೇನೆ ಎಂದರು. ಜೊತೆಗೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಳಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗಳನ್ನು ಪೂರ್ಣಗೊಳಿಸಲು ೩ ಕೋಟಿ ರೂ. ಅನುದಾನ ಅಗತ್ಯವಿದ್ದು ಇದನ್ನು ಬಿಡುಗಡೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.