ಕೆ.ಆರ್.ಪೇಟೆ: ಪಟ್ಟಣದ ಟೌನ್ ಪೋಲೀಸ್ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮದಡಿ ಮಾನವ ಕಳ್ಳಸಾಗಾಣಿಕೆ ಕುರಿತು ಸಂವಾದ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಇನ್ಸ್ಪೆಕ್ಟರ್ ಸುಮಾರಾಣಿ ಮಾತನಾಡಿ, ಬಡ ಕುಟುಂಬ ಹಿನ್ನೆಲೆಯ ಮಕ್ಕಳು ಮತ್ತು ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಅಪಹರಣ ಮಾಡಿ ಅಥವಾ ಉದ್ಯೋಗ ಕೊಡಿಸುವ, ಹಣ ಕೊಡಿಸುವ ಅಮಿಷಗಳನ್ನು ಒಡ್ಡಿ ಮನೆಯಿಂದ ಕರೆದುಕೊಂಡು ಹೋಗಿ ಮುಂಬೈ ಅಥವಾ ಬೇರೆ ಬೇರೆ ಕಡೆ ಮಾರಾಟ ಮಾಡುವ ದಂದೆಯನ್ನೆ ಮಾನವ ಕಳ್ಳ ಸಾಗಾಣಿಕೆ ಎಂದು ಕರೆಯಲಾಗುತ್ತದೆ. ಮಹಿಳೆಯರನ್ನು ಕರೆದೊಯ್ದು ವೇಶ್ಯವಾಟಿಕೆಗೆ ತಳ್ಳುವುದು. ಅಪ್ರಾಪ್ತ ಮಕ್ಕಳನ್ನು ಜೀತಕ್ಕೆ ದೂಡುವುದು. ಬಾಲ ಕಾರ್ಮಿಕರನ್ನಾಗಿಸುವುದು. ಹಣಕ್ಕೆ ಬೇರೆಯವರಿಗೆ ಮಾರಾಟ ಮಾಡುವುದು ಈ ದಂದೆಯ ಪ್ರಮುಖ ಉದ್ದೇಶವಾಗಿರುತ್ತದೆ ಎಂದರು.
ಇಂತಹ ದಂದೆಯ ಜಾಲವನ್ನು ಭೇದಿಸಿ ಇದರಲ್ಲಿ ಭಾಗಿಯಾಗುವವರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆಯು ಮಾಡುತ್ತಾ ಬಂದಿದೆ. ಇಂತಹ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಸ್ವಲ್ಪ ಸುಳಿವು ಸಿಕ್ಕಿದರೆ ಸಾಕು ಕೂಡಲೇ ಕಾರ್ಯಪ್ರವೃತ್ತರಾಗಿ ದಂಧೆಯಲ್ಲಿ ಸಿಲುಕಿದ ಮಹಿಳೆಯರು ಮತ್ರು ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆತಂದು ಅವರ ಪೋಷಕರ ವಶಕ್ಕೆ ನೀಡುವ ಕರ್ತವ್ಯವನ್ನು ರಕ್ಷಣಾ ಇಲಾಖೆಯು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾನೂನು ಸಲಹೆಗಾರರಾದ ಎಚ್.ವಿ. ಆಶಾ, ವಕೀಲ ಡಿ.ಜೆ.ಗಣೇಶ್ ಮಾನವ ಕಳ್ಳ ಸಾಗಾಣಿಕೆ ಮತ್ತು ಕಾನೂನು ಕುರಿತು ಮಾತನಾಡಿದರು. ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪದ್ಮಾ, ಸಬ್ಇನ್ಸ್ಪೆಕ್ಟರ್ ನವೀನ್, ಬಸಪ್ಪ ಇತರರು ಇದ್ದರು.