Friday, June 20, 2025
Google search engine

Homeರಾಜ್ಯಸುದ್ದಿಜಾಲವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ದಾವಣಗೆರೆ: ಮಲೇರಿಯಾ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಇದನ್ನು ಗುಣಪಡಿಸಿ ತಡೆಗಟ್ಟಬಹುದು. ಅನಾಫೀಲಿಸ್ ಸೊಳ್ಳೆ ಕಡಿತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದೇ ಆರಂಭಿಕ ಚಿಕಿತ್ಸೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಟ್ ಸಮಿತಿ ಅಧ್ಯಕ್ಷ ಸುರೇಶ್ .ಬಿ. ಇಟ್ಟಾಳ್ ತಿಳಿಸಿದರು.

ಅವರು ಶುಕ್ರವಾರ (26)ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ಮಲೇರಿಯಾದಿಂದ ಬಳಲುತ್ತಿರುವ ಮತ್ತು ಇದರಿಂದ ಮರಣ ಪ್ರಮಾಣ ಇಳಿಕೆ ಮಾಡಲು ಜಾಗತಿಕ ಗಮನ ಸೆಳೆಯಲು ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಹೆಚ್ಚು ಸಮಾನತೆ ಜಗತ್ತಿಗೆ, ಮಲೇರಿಯಾ ವಿರುದ್ದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷದಡಿ ಆಚರಣೆ ಮಾಡಲಾಗುತ್ತಿದೆ.

ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ, ಮಲೇರಿಯಾ ಜ್ವರ ಹೆಚ್ಚಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಂಡುಬರುತ್ತದೆ. ಅನಾಫಿಲಿಸ್ ಸೊಳ್ಳೆ ಕಚ್ಚಿದ ತಕ್ಷಣ ಪರಾವಲಂಭಿ ರೋಗಿಯ ಯಕೃತ್ತು ಮತ್ತು ರಕ್ತ ಕಣಗಳ ಮೇಲೆ ದಾಳಿ ಮಾಡುತ್ತದೆ. ಸೊಳ್ಳೆ ಕಡಿತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದರು.

ಜಾಥಾದಲ್ಲಿ ಮತದಾನ ಜಾಗೃತಿ; ಮಲೇರಿಯಾ ಜಾಥಾ ವೇಳೆ ಮತದಾನಕ್ಕೆ ಸಂಬಂಧಿಸಿದ ಘೋಷ ವಾಕ್ಯಗಳ ಪ್ಲೆಕಾರ್ಡ್‍ಗಳನ್ನು ಹಿಡಿದು ಪ್ರದರ್ಶನ ಮಾಡುವ ಮೂಲಕ ಮತದಾನದ ಮಹತ್ವ ತಿಳಿಸಲಾಯಿತು. ಪ್ರತಿ ಮತ ಅಮೂಲ್ಯ, ತಪ್ಪದೇ ಮತ ಚಲಾಯಿಸಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ ನನ್ನ ಧ್ವನಿ ನನ್ನ ಶಕ್ತಿ ನಿಮ್ಮ ಮತ ಅಮೂಲ್ಯ, ಕಡ್ಡಾಯವಾಗಿ ಮತದಾನ ಮಾಡಿ, ಯಾವುದೇ ಆಮಿಷ, ಬೆದರಿಕೆಗೆ ಮಣಿಯದೇ ತಪ್ಪದೇ ಮತ ಚಲಾಯಿಸಿ, ಯಾವುದೇ ಮತದಾರ ಮತದಾನದಿಂದ ಹೊರಗೂಳಿಯಬಾರದು ಎಂಬ ಮತದಾನದ ಪಟಗಳನ್ನು ಹಿಡಿದು ಮತದಾನ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿüಕಾರಿ ಮಲ್ಲನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ , ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ. ಗಂಗಾಧರ್, ಆರ್.ಸಿ.ಎಚ್.ಓ. ಡಾ.ರೇಣುಕಾ ಆರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಸರ್ವಲೆನ್ಸ್ ಅಧಿಕಾರಿ ಡಾ. ರಾಘವನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular