ವರದಿ : ವಿನಯ್ ದೊಡ್ಡಕೊಪ್ಪಲು
ಕೆ..ಆರ್.ನಗರ: ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಮಾನ್ಯ ಸಾಧನೆ ಮಾಡಿ ದೇಶವೇ ಹೆಮ್ಮೆ ಪಡುವಂತಹ ಕೀರ್ತಿ ಗಳಿಸಿದ ಹಸಿರುಕ್ರಾಂತಿಯ ಹರಿಕಾರ ಬಾಬುಜಗಜೀವನ್ರಾಂ ಅವರ ಜೀವನ ಮತ್ತು ಸಾಧನೆ ಸರ್ವರಿಗೂ ಸ್ಪೂರ್ತಿದಾಯಕ ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ನಾಡ ಹಬ್ಬಗಳ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಡಾ.ಬಾಬುಜಗಜೀವನ್ರಾಂ ಅವರ ೧೧೭ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮ ಸಮಾಜದಲ್ಲಿ ಅಸಮಾನತೆ ತೊಲಗಿಸಿ ಸಮಾನತೆ ತರಲು ಶ್ರಮಿಸಿ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಿದ ಅವರ ಉತ್ತಮ ಕೆಲಸ ಪ್ರಶಂಸನೀಯ ಎಂದರು.
ಆಹಾರ ಕ್ಷೇತ್ರದಲ್ಲಿ ಭಾರತ ದೇಶ ಸ್ವಾವಲಂಬನೆ ಸಾಧಿಸಿ ವಿಶ್ವದಲ್ಲಿಯೇ ಹೆಸರುವಾಸಿಯಾಗಲು ಕಾರಣವಾಗುವಂತಹ ಹಸಿರು ಕ್ರಾಂತಿಗೆ ಮುನ್ನುಡಿ ಬರೆದ ಜಗಜೀವನ್ರಾಂ ಅಂತಹ ಮಹಾನ್ ನಾಯಕನಿಂದ ಭಾರತ ನಿರಂತರವಾಗಿ ಆಹಾರ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ತಿಳಿಸಿದರು.
ತಮ್ಮ ಜೀವಿತಾವಧಿಯಲ್ಲಿ ಸಹೋದರತೆ ಮತ್ತು ಸಹಭಾಳ್ವೆಯ ಜೀವನ ನಡೆಸುವ ಪಾಠ ಕಲಿಸಿರುವ ಅವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡುವುದರ ಜತೆಗೆ ನಾವು ಸಾಧನೆ ಮಾಡಬಹುದಾಗಿದ್ದು ಆ ಮೂಲಕ ಅಂತಹ ಮಹಾನುಭಾವರ ಜಯಂತಿಗೆ ಅರ್ಥ ಬರುವಂತೆ ನಡೆದುಕೊಳ್ಳಬೇಕೆಂದರು.
ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ತಾ.ಪಂ. ಇಒ ಜಿ.ಕೆ.ಹರೀಶ್, ನಿವೃತ್ತ ಉಪನ್ಯಾಸಕ ಕೃಷ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್ಕುಮಾರ್ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಸದಸ್ಯರಾದ ನಟರಾಜು, ಸಿ.ಶಂಕರ್, ಮುಖಂಡರಾದ ರಾಮಾಚಾರಿ, ವೃಷಭೇಂದ್ರ, ಬಿ.ಹೆಚ್.ಕುಮಾರ್, ಬೆಟ್ಟುಮಹದೇವ್, ಪರಶುರಾಮ್, ರಮೇಶ್, ಜಿ.ಎಸ್.ಕುಮಾರ್, ವಜ್ರೇಶ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಪುರಸಭೆ ಮುಖ್ಯಾಧಿಕಾರಿ ಹೇಮಂತ್.ಎಸ್.ದೊಳ್ಳೆ, ವ್ಯವಸ್ಥಾಪಕಿ ಸುಧಾರಾಣಿ, ಸಿಬ್ಬಂದಿಗಳಾದ ಸಿದ್ದರಾಜು, ರತ್ನಮಾಲ, ರಾಣಿ ಇದ್ದರು.
