ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಈಗ ಭಾರತ ಮತ್ತು ವಿಶೇಷವಾಗಿ ಕರ್ನಾಟಕದ ವ್ಯಾಪಾರ ಕ್ಷೇತ್ರಕ್ಕೂ ತಟ್ಟಿದೆ. ಇರಾನ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಮಸಾಲೆ ಪದಾರ್ಥಗಳು, ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್ಗಳ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇಸ್ರೇಲ್ ನಡೆಸಿದ ತೀವ್ರ ವೈಮಾನಿಕ ದಾಳಿಗಳ ನಂತರ ಇರಾನ್ ತನ್ನ ಬಂದರ್ ಅಬ್ಬಾಸ್ ಸೇರಿ ಹಲವಾರು ಪ್ರಮುಖ ನೌಕಾ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಪರಿಣಾಮವಾಗಿ, ಈ ಮಾರ್ಗಗಳಲ್ಲಿ ಸಾಗುತ್ತಿದ್ದ ವ್ಯಾಪಾರಿಕ ಸರಕು ಸಾಗಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದೇ ಮೂಲಕ ಭಾರತದ ವಿವಿಧ ಭಾಗಗಳಿಗೆ, ಮುಖ್ಯವಾಗಿ ಬೆಂಗಳೂರಿಗೆ ತಲುಪಬೇಕಾಗಿದ್ದ ಸೇಬು, ಖರ್ಜೂರ, ಪಿಸ್ತಾ, ಬಾದಾಮಿ, ಅಂಜೂರ ಹಾಗೂ ವಿಭಿನ್ನ ಮಸಾಲಾ ಪದಾರ್ಥಗಳ ಆಮದು ತಡೆಗಟ್ಟಲ್ಪಟ್ಟಿದೆ.
ಇರಾನ್ನಿಂದ ಮುಸ್ಲಿಮರು ಹೆಚ್ಚಾಗಿ ಬಳಸುವ ಮುಜಪತಿ ಖರ್ಜೂರ, ಗಸಗಸೆ, ನೆಟಾಲ್ ಒಣದ್ರಾಕ್ಷಿ, ಪಿಸ್ತಾ, ಪೈನಾಬೀಜ, ಅಂಜೂರ, ಮೇಥಿ, ಮಾರ್ಮಾ ಬಾದಾಮಿ ಬೆಂಗಳೂರಿಗೆ ಸಪ್ಲೈ ಆಗುತ್ತಿಲ್ಲ. ಈ ಸರಬರಾಜು ಸ್ಥಗಿತದಿಂದ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳ ಬೆಲೆ ಗಗನಕ್ಕೇರಲಿದೆ. ಪ್ರಮುಖವಾಗಿ ಕೆ.ಜಿ ಗಸಗಸಗೆ 2,500 ರೂ. ಆಗಿದೆ. ಪೈನಾಬೀಜಾ ಸಹ ಹತ್ತು ಸಾವಿರದ ಗಡಿ ದಾಟಿದೆ. ಇರಾನ್ ಸೇಬು ಪ್ರತಿದಿನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ 70-80 ಕಂಟೇನರ್ ಬರುತ್ತಿತ್ತು. ಆದರೆ ಕಳೆದು ಮೂರು-ನಾಲ್ಕು ದಿನದಿಂದ ಬರುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.